ಚಂಡೀಗಢ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ಕಾಣಿಸಿಕೊಂಡು ಭಾರಿ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿರುವ ಮಿಡತೆಗಳಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಗ್ರಾಮೀಣ ಪ್ರದೇಶದ ಹೊಲಗಳಲ್ಲಿ ಬೆಳೆ ಹಾನಿ ಮಾಡಿ, ರಾಜಧಾನಿ ಜೈಪುರಕ್ಕೂ ಬಂದಿವೆ. ಇದೀಗ ಹರಿಯಾಣಕ್ಕೂ ಬಂದಿರುವ ಮಿಡತೆ ಹಿಂಡುಗಳು ಆಕ್ರಮಣಕ್ಕೆ ಮುಂದಾಗುತ್ತಿವೆ.
ಸಿರ್ಸಾ, ಹಿಸಾರ್, ಭಿವಾನಿ, ಚಾರ್ಖಿ ದಾದ್ರಿ ಮತ್ತು ರೇವಾರಿ ಸೇರಿದಂತೆ ಹರಿಯಾಣದ ಕೆಲವು ಜಿಲ್ಲೆಗಳಲ್ಲಿ ಮಿಡತೆಗಳು ಹಿಂಡು ಹಿಂಡಾಗಿ ಆಗಮಿಸಿವೆ. ಮಿಡತೆಗಳ ಒಂದು ದೊಡ್ಡ ಗುಂಪೊಂದು ರಾಜಸ್ಥಾನದ ಜೈಪುರವನ್ನು ತಲುಪಿದ್ದು, ಈಗ ಹರಿಯಾಣಕ್ಕೂ ಆತಂಕ ಎದುರಾಗಿದೆ.
ಮಿಡತೆಗಳ ದಾಳಿ ಕುರಿತು ನಾವು ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಎಚ್ಚರಿಕೆ ನೀಡಿದ್ದೇವೆ. ಒಂದು ವೇಳೆ ಮಿಡತೆ ಹಿಂಡುಗಳು ದಾಳಿ ಮಾಡಿದ್ದು ಕಂಡು ಬಂದರೆ ಕೂಡಲೇ ಅವರು ಸರ್ಕಾರಕ್ಕೆ ಮಾಹಿತಿ ನೀಡಬೇಕು. ಆಗ ನಾವು ಅವುಗಳನ್ನು ಕೊಲ್ಲಬಹುದು ಎಂದು ಸೂಚನೆ ನೀಡಿದ್ದೇವೆ ಎಂದು ಹರಿಯಾಣ ಕೃಷಿ ಸಚಿವ ಜಯಪ್ರಕಾಶ್ ದಲಾಲ್ ತಿಳಿಸಿದ್ದಾರೆ.
ಮಿಡತೆಗಳನ್ನು ಕೊಲ್ಲಲು ನಾವು ಸಾಕಷ್ಟು ಪ್ರಮಾಣದ ರಾಸಾಯನಿಕಗಳನ್ನು ಸಂಗ್ರಹಿಸಿದ್ದೇವೆ. ಮಿಡತೆ ಹಾವಳಿ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಗತ್ಯ ಕ್ರಮವನ್ನು ಕೈಗೊಳ್ಳಲು ಈ ವಿಚಾರವಾಗಿ ಸೂಕ್ತ ಸಮಯದಲ್ಲಿ ಪಾಕಿಸ್ತಾನ ನಮಗೆ ಮಾಹಿತಿ ನೀಡಿಲ್ಲ. ಇದೀಗ ಮಿಡತೆ ವಿಚಾರವು ತುಂಬಾ ಗಂಭೀರವಾಗಿದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.