ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮತ್ತು ಗಾಯಕ ಸೋನು ನಿಗಮ್
ಜೈಪುರ: ತಮ್ಮ ಸಂಗೀತ ಕಾರ್ಯಕ್ರಮದಿಂದ ಮಧ್ಯದಲ್ಲಿಯೇ ಎದ್ದು ಹೋದ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಮತ್ತು ಇತರ ನಾಯಕರ ವಿರುದ್ಧ ಖ್ಯಾತ ಗಾಯಕ ಸೋನು ನಿಗಮ್ ಅಸಮಾಧಾನ ಹೊರಹಾಕಿದ್ದಾರೆ.
ಮೂರು ದಿನಗಳ ‘ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್ಮೆಂಟ್ ಶೃಂಗಸಭೆ’ಯಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗಾಗಿ ಹೋಟೆಲ್ ರಾಂಬಾಗ್ ಪ್ಯಾಲೇಸ್ನಲ್ಲಿ ಸಾಂಸ್ಕೃತಿಕ ಸಂಜೆಯ ಭಾಗವಾಗಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಸೇರಿದಂತೆ ಇತರೆ ಗಣ್ಯರು ಸಂಗೀತ ಕಾರ್ಯಕ್ರಮದಿಂದ ಮಧ್ಯದಲ್ಲಿಯೇ ಎದ್ದು ಹೋಗಿದ್ದರು. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊ ಹಂಚಿಕೊಂಡಿರುವ 51 ವರ್ಷದ ಸೋನು, ಜನಪ್ರತಿನಿಧಿಗಳ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
‘ಭಾರತದ ಎಲ್ಲಾ ಗೌರವಾನ್ವಿತ ರಾಜಕಾರಣಿಗಳಲ್ಲಿ ಒಂದು ವಿನಮ್ರ ವಿನಂತಿ... ನೀವು ಮಧ್ಯದಲ್ಲಿ ಎದ್ದು ಹೋಗಬೇಕಾದರೆ ಯಾವುದೇ ಕಲಾವಿದರ ಕಾರ್ಯಕ್ರಮಕ್ಕೂ ಹಾಜರಾಗಬೇಡಿ. ಒಂದು ವೇಳೆ ನೀವು ಯಾವುದೇ ಕಾರ್ಯಕ್ರಮವನ್ನು ಮಧ್ಯದಲ್ಲಿಯೇ ಬಿಟ್ಟು ಹೋಗಬೇಕೆಂದು ಬಯಸಿದರೆ ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನವೇ ಹೊರಟುಬಿಡಿ. ಕಾರ್ಯಕ್ರಮದ ಮಧ್ಯದಲ್ಲಿ ಹೋಗುವುದು ಕಲಾವಿದರಿಗೆ ಮತ್ತು ಕಲಾ ದೇವತೆ ಸರಸ್ವತಿಗೆ ಮಾಡುವ ಅವಮಾನವಾಗುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ.
‘ದಿಲ್ ದೀವಾನಾ’, ‘ಸೂರಜ್ ಹುವಾ ಮದ್ಧಂ ಚಾಂದ್ ಜಲ್ನೇ ಲಗಾ’, ‘ಹರ್ ಘಡೀ ಬದಲ್ ರಹೀ ಹೈ ರೂಪ್ ಜಿಂದಗಿ’, ‘ಆಜಾ ಆಜಾ ಮೈ ಹೂಂ ಪ್ಯಾರ್ ತೇರಾ’, ‘ಹಸ್ತಿ ರಹೇ ತೊ ಹಸ್ತಿ ರಹೇ’ ಹಾಡುಗಳ ಮೂಲಕ ಸೋನು ನಿಗಮ್ ಹೆಸರುವಾಸಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.