ADVERTISEMENT

ನ್ಯಾಯಯುತ ಕ್ಷೇತ್ರ ಪುನರ್ ವಿಂಗಡನೆಗೆ ಆಗ್ರಹ; ಹೈದರಾಬಾದ್‌ನಲ್ಲಿ JAC ಮುಂದಿನ ಸಭೆ

ಪಿಟಿಐ
Published 22 ಮಾರ್ಚ್ 2025, 9:47 IST
Last Updated 22 ಮಾರ್ಚ್ 2025, 9:47 IST
<div class="paragraphs"><p>ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದ ಜೆಎಸಿ ಸಭೆಯಲ್ಲಿ ಎಂ.ಕೆ. ಸ್ಟಾಲಿನ್, ಪಿಣರಾಯಿ ವಿಜಯನ್, ರೇವಂತ ರೆಡ್ಡಿ, ಭಗವಂತ ಮಾನ್, ಡಿ.ಕೆ. ಶಿವಕುಮಾರ್, ಟಿ.ಆರ್. ಬಾಲು, ಕೆ.ಟಿ. ರಾಮ ರಾವ್ ಪಾಲ್ಗೊಂಡರು</p></div>

ತಮಿಳುನಾಡಿನ ಚೆನ್ನೈನಲ್ಲಿ ಶನಿವಾರ ನಡೆದ ಜೆಎಸಿ ಸಭೆಯಲ್ಲಿ ಎಂ.ಕೆ. ಸ್ಟಾಲಿನ್, ಪಿಣರಾಯಿ ವಿಜಯನ್, ರೇವಂತ ರೆಡ್ಡಿ, ಭಗವಂತ ಮಾನ್, ಡಿ.ಕೆ. ಶಿವಕುಮಾರ್, ಟಿ.ಆರ್. ಬಾಲು, ಕೆ.ಟಿ. ರಾಮ ರಾವ್ ಪಾಲ್ಗೊಂಡರು

   

ಪಿಟಿಐ ಚಿತ್ರ

ಚೆನ್ನೈ: ಕ್ಷೇತ್ರ ಮರುವಿಂಗಡನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಆಯೋಜಿಸಿರುವ ಜಂಟಿ ಕಾರ್ಯಪಡೆ ಸಮಿತಿಯ ಮುಂದಿನ ಸಭೆಯು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ADVERTISEMENT

‘ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆಗೆ ಮುಂದಾಗಿರುವ ಕೇಂದ್ರ ಸರ್ಕಾರವು, ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ಕುಂಠಿತಗೊಳಿಸುವ ಷಡ್ಯಂತ್ರ ನಡೆಸಿದೆ. ಇದನ್ನು ಪ್ರತಿಭಟಿಸುವಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಿದೆ’ ಎಂದಿದ್ದಾರೆ.

‘ನ್ಯಾಯಯುತವಾದ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ಕಾನೂನು ತಜ್ಞರ ಸಮಿತಿ ರಚಿಸುವ ಅಗತ್ಯವಿದೆ. ಜತೆಗೆ ಕಾನೂನಿನ ಮಾರ್ಗದಲ್ಲೇ ರಾಜಕೀಯ ಹೆಜ್ಜೆಗಳನ್ನಿಡುವ ಕುರಿತು ಸಮಿತಿಯ ಸದಸ್ಯರು ತಮ್ಮ ಅಮೂಲ್ಯ ಸಲಹೆಗಳನ್ನು ನೀಡಬೇಕು. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ, ಗೆಲುವು ಸಾಧಿಸಲು ಸಾಧ್ಯ’ ಎಂದಿದ್ದಾರೆ.

‘ನ್ಯಾಯಯುತ ಬೇಡಿಕೆಗೆ ಒಗ್ಗಟ್ಟಿನಿಂದ ಹೋರಾಡೋಣ. ನಮ್ಮ ಪ್ರಾತಿನಿಧ್ಯ ಯಾವುದೇ ಹಂತದಲ್ಲೂ ಕುಂಠಿತವಾಗದಂತೆ ಎಚ್ಚರವಹಿಸೋಣ. ನ್ಯಾಯಯುತ ಕ್ಷೇತ್ರ ಪುನರ್‌ವಿಂಗಡನೆ ಆಗುವವರೆಗೂ ಎಲ್ಲರೂ ಹೋರಾಡೋಣ’ ಎಂದಿದ್ದಾರೆ.

‘ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣದ ರಾಜ್ಯಗಳು ಸಾಕಷ್ಟು ಉತ್ತಮ ಕ್ರಮ ವಹಿಸಿವೆ. ಈಗ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್‌ ವಿಂಗಡನೆ ಮಾಡಿದರೆ, ಅದು ತಮಿಳುನಾಡು ಒಳಗೊಂಡಂತೆ ಈ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾದರೆ, ಅದು ನೇರವಾಗಿ ರಾಜ್ಯದ ರಾಜಕೀಯ ಬಲದ ಮೇಲೆ ಪರಿಣಾಮ ಬೀರಲಿದೆ. ಬಹುಮತವೇ ಇಲ್ಲದೆ ನಮಗೆ ಧ್ವನಿಯೇ ಇಲ್ಲದಂತಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕ್ಷೇತ್ರ ಪುನರ್‌ ವಿಂಗಡನೆಗೆ ವಿರೋಧಪಕ್ಷಗಳ ವಿರೋಧವಿಲ್ಲ. ಬದಲಿಗೆ ಅದನ್ನು ನ್ಯಾಯಯುತವಾಗಿ ನಡೆಸಿ ಮತ್ತು ಯಾವುದೇ ರಾಜಕೀಯ ದುರುದ್ದೇಶ ನುಸುಳದಂತೆ ಎಚ್ಚರವಹಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ’ ಎಂದು ಸ್ಟಾಲಿನ್ ಹೇಳಿದರು.

ಕೇಂದ್ರದ ಕ್ಷುಲ್ಲಕ ರಾಜಕೀಯ ಹಿತಾಸಕ್ತಿ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ‘ಯಾವ ರಾಜ್ಯವನ್ನೂ ಸಂಪರ್ಕಿಸದೇ ಏಕಾಏಕಿ ಕ್ಷೇತ್ರ ಪುನರ್ ವಿಂಗಡನೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿರುವುದು ಸಂವಿಧಾನದ ತತ್ವ ಪಾಲನೆ ಇಲ್ಲದ ಕ್ಷಲ್ಲಕ ರಾಜಕೀಯ ಹಿತಾಸಕ್ತಿಯಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ಜನಸಂಖ್ಯೆ ಆಧಾರದಲ್ಲೇ ಕ್ಷೇತ್ರ ಪುನರ್ ವಿಂಗಡನೆ ಮಾಡುವುದಾದರೆ, ಈಗಿರುವ ಕ್ಷೇತ್ರಗಳ ಸಂಖ್ಯೆ ಕಳೆದುಕೊಳ್ಳುವ ರಾಜ್ಯಗಳಲ್ಲಿ ಕೇರಳವೂ ಸೇರಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ ದಾಸ್ ಮತ್ತು ಬಿಜು ಜನತಾ ದಳ ಮುಖಂಡ ಸಂಜಯ್ ಕುಮಾರ್ ದಾಸ್ ಬರ್ಮಾ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.