ADVERTISEMENT

ನೂಪುರ್‌ ಶರ್ಮಾ ವಿವಾದ; 'ಪಕ್ಷ ಯಾವುದೇ ಧರ್ಮದ ವಿರೋಧಿ ಅಲ್ಲ'–ಬಿಜೆಪಿ ಪ್ರಕಟಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜೂನ್ 2022, 11:38 IST
Last Updated 5 ಜೂನ್ 2022, 11:38 IST
ಬಿಜೆಪಿ ವಕ್ತಾರರಾಗಿದ್ದ ನೂಪುರ್‌ ಶರ್ಮಾ ಅವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉತ್ತರಪ್ರದೇಶದ ಕಾನ್ಪುರದಲ್ಲಿ ಉದ್ರಿಕ್ತ ಜನರು ಶುಕ್ರವಾರ ಕಲ್ಲು ತೂರಾಟ ನಡೆಸಿದ್ದರು.
ಬಿಜೆಪಿ ವಕ್ತಾರರಾಗಿದ್ದ ನೂಪುರ್‌ ಶರ್ಮಾ ಅವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉತ್ತರಪ್ರದೇಶದ ಕಾನ್ಪುರದಲ್ಲಿ ಉದ್ರಿಕ್ತ ಜನರು ಶುಕ್ರವಾರ ಕಲ್ಲು ತೂರಾಟ ನಡೆಸಿದ್ದರು.   

ನವದೆಹಲಿ: ದೂರದರ್ಶನದ ಚರ್ಚೆಯೊಂದರಲ್ಲಿ ಪ್ರವಾದಿ ಮಹಮ್ಮದ್ ಅವರ ಕುರಿತು ಬಿಜೆಪಿ ವಕ್ತಾರರೊಬ್ಬರು ನೀಡಿದ ಹೇಳಿಕೆಯಿಂದ ಮುಜುಗರಕ್ಕೆ ಒಳಗಾಗಿರುವ ಪಕ್ಷವು ಭಾನುವಾರ ಪ್ರಕಟಣೆ ಹೊರಡಿಸಿದೆ. ಪಕ್ಷವು ಎಲ್ಲ ಧರ್ಮಗಳನ್ನು ಗೌರವಿಸುತ್ತದೆ ಎನ್ನುವ ಮೂಲಕ ವಕ್ತಾರರ ವಿವಾದಾತ್ಮಕ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ.

'ಯಾವುದೇ ವರ್ಗ ಅಥವಾ ಧರ್ಮವನ್ನು ಅವಹೇಳನ ಮಾಡುವ ಅಥವಾ ಕೀಳಾಗಿ ಕಾಣುವ ಯಾವುದೇ ಸಿದ್ಧಾಂತಗಳಿಗೆ ಬಿಜೆಪಿಯ ಕಠಿಣ ವಿರೋಧವಿದೆ. ಬಿಜೆಪಿಯು ಅಂಥ ವ್ಯಕ್ತಿಗಳನ್ನು ಅಥವಾ ಚಿಂತನೆಗಳನ್ನು ಪ್ರಚುರಪಡಿಸುವುದಿಲ್ಲ' ಎಂದುಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ಅವರು ಸಹಿ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭಾರತದ ಸಂವಿಧಾನವು ಜನರಿಗೆ ಅವರ ನಂಬಿಕೆ ಹಾಗೂ ಧರ್ಮವನ್ನು ಪಾಲಿಸುವ ಹಕ್ಕು ನೀಡಿರುವುದಾಗಿ ಪ್ರಸ್ತಾಪಿಸಲಾಗಿದೆ. 'ಯಾವುದೇ ಧರ್ಮದ ಧಾರ್ಮಿಕ ವ್ಯಕ್ತಿತ್ವಗಳ ಅವಹೇಳವನ್ನು ಬಿಜೆಪಿಯು ತೀವ್ರವಾಗಿ ಖಂಡಿಸುತ್ತದೆ' ಎಂದು ಪ್ರಕಟಿಸಲಾಗಿದೆ.

ADVERTISEMENT
ನೂಪುರ್‌ ಶರ್ಮಾ

ಟಿವಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಕ್ತಾರ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸುವ ಹೇಳಿಕೆಗಳನ್ನು ನೀಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಪಕ್ಷದಿಂದ ಈ ಪ್ರಕಟಣೆ ಹೊರಬಂದಿದೆ. ಆದರೆ, ಪ್ರಕಟಣೆಯಲ್ಲಿ ವಕ್ತಾರರ ಕುರಿತು ಅಥವಾ ಅವರ ಹೇಳಿಕೆಗಳ ಕುರಿತು ಪ್ರಸ್ತಾಪಿಸಿಲ್ಲ.

ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಉತ್ತರಪ್ರದೇಶದ ಕಾನ್ಪುರದಲ್ಲಿ ಉದ್ರಿಕ್ತ ಜನರ ಗುಂಪು ಬಲವಂತವಾಗಿ ಅಂಗಡಿಗಳನ್ನು ಬಂದ್‌ ಮಾಡಿಸಲು ಯತ್ನಿಸಿದಾಗ ಹಿಂಸಾಚಾರ ಭುಗಿಲೆದ್ದು, ಎರಡು ಗುಂಪುಗಳು ಪರಸ್ಪರ ಬಾಂಬ್‌ ಎಸೆದು, ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು.

ಕೋಮು ಘರ್ಷಣೆಯ ಹಿಂದಿನ ಪ್ರಮುಖ ಸಂಚುಕೋರ ಹಯಾತ್ ಜಫರ್ ಹಶ್ಮಿ ಮತ್ತು ಆತನ ಜತೆಗಿದ್ದ ಇತರ ನಾಲ್ವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದು, ಸಂಚುಕೋರ ಹಶ್ಮಿಗೆ ಪಿಎಫ್‌ಐ ಸಂಘಟನೆ ಜತೆಗೆ ಸಂಪರ್ಕ ಇದೆಯೇ ಎನ್ನುವುದರ ಬಗ್ಗೆ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ಮಸೀದಿಗಳ ಕುರಿತು ಚರ್ಚೆ, ಪ್ರಕರಣಗಳ ವಿಚಾರಣೆಯ ಹಿನ್ನೆಲೆಯಲ್ಲಿ 'ಪ್ರತಿ ಮಸೀದಿಯಲ್ಲಿ ಶಿವಲಿಂಗ ಹುಡುಕುವ ಮತ್ತು ಪ್ರತಿ ದಿನ ಹೊಸ ವಿವಾದ ಸೃಷ್ಟಿಸುವ ಅಗತ್ಯವಿಲ್ಲ' ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.