ಕೋಲ್ಕತ: ಪಶ್ಚಿಮ ಬಂಗಾಳದ ಅಸಾನ್ಸೊಲ್ನಲ್ಲಿ ನಡೆದ ಹೊದಿಕೆ ವಿತರಣೆ ಸಮಾರಂಭದಲ್ಲಿ ಕಾಲ್ತುಳಿತ ಉಂಟಾಗಿ ಮೂವರು ಮೃತಪಟ್ಟಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮತ್ತು ವಿಪಕ್ಷ ನಾಯಕ ಸುವೇಂದು ಅಧಿಕಾರಿ ಭಾಗವಹಿಸಿದ್ದರು.
ಸುವೇಂದು ಅಧಿಕಾರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ ಒಂದು ಮಗು ಸಹಿತ ಮೂವರು ಮೃತಪಟ್ಟಿದ್ದಾರೆ ಎಂದು ತೃಣಮೂಲ ಸಂಸದ ಕಾಕೊಲಿ ಘೋಶ್ ದಸ್ತಿದಾರ್ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಟಿಎಂಸಿಯ ಇತರ ಸಂಸದರು ಕೂಡ ಘಟನೆಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ.
ಅವಘಡದ ಬಗ್ಗೆ ಸುವೇಂದು ಅಧಿಕಾರಿ ಟ್ವೀಟ್ ಮಾಡಿದ್ದು, ಅಸಾನ್ಸೊಲ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದೆ. ಅಲ್ಲಿ, ನಾನು ಇರುವಷ್ಟು ಸಮಯ ಎಲ್ಲವೂ ಚೆನ್ನಾಗಿತ್ತು. ಪೊಲೀಸ್ ಭದ್ರತೆ, ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರು ಕೂಡ ಇದ್ದರು. ಆದರೆ ನಾನು ಹೊರಟ ಬಳಿಕ, ಪೊಲೀಸ್ ಭದ್ರತೆ ಹಿಂಪಡೆಯಲಾಯಿತು. ಸ್ವಯಂಸೇವಕರು ಕೂಡ ಸ್ಥಳದಿಂದ ತೆರಳಿದ್ದಾರೆ. ನಂತರ, ಆಯೋಜಕರಿಗೆ ಜನಸಂದಣಿ ನಿರ್ವಹಿಸುವುದು ಕಷ್ಟವಾಗಿದೆ. ಅದರಿಂದ ಅವಘಡ ಸಂಭವಿಸಿದೆ. ಇಲ್ಲಿ ನಾನು ಯಾರನ್ನೂ ದೂರುತ್ತಿಲ್ಲ. ಮೃತಪಟ್ಟವರ ಮತ್ತು ಗಾಯಗೊಂಡವರ ಕುಟುಂಬದ ಜತೆ ನಾವಿದ್ದೇವೆ, ಅದಕ್ಕೆ ಅಗತ್ಯ ನೆರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.