
ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)
ಠಾಣೆ: ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲ ಎನ್ನುವ ಕಾರಣಕ್ಕೆ ಸ್ಥಳೀಯ ರೈಲಿನಲ್ಲಿ ಜನರ ಗುಂಪೊಂದು ಹಲ್ಲೆ ನಡೆಸಿದ್ದರಿಂದ ಮನನೊಂದ 19 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ.
ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಅರ್ನವ್ ಲಕ್ಷ್ಮಣ್ ಖೈರೆ ಪೂರ್ವ ಕಲ್ಯಾಣ್ನಲ್ಲಿದ್ದ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡಿದ್ದ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
‘ಮುಳುಂದ್ನಲ್ಲಿರುವ ಕಾಲೇಜಿಗೆ ಮಂಗಳವಾರ ರೈಲಿನಲ್ಲಿ ತೆಳುತ್ತಿದ್ದಾಗ ಹಲ್ಲೆ ನಡೆದಿದೆ. ಜನ ಸಂದಣಿ ಇದ್ದ ಕಾರಣ ಮುಂದೆ ಹೋಗುವಂತೆ ಸಹ ಪ್ರಯಾಣಿಕರಿಗೆ ಆರ್ನವ್ ಹೇಳಿದ್ದಾನೆ. ಮರಾಠಿಯಲ್ಲಿ ಮಾತನಾಡಲಿಲ್ಲ ಎಂದು ಕೆಲವರು ಛೀಮಾರಿ ಹಾಕಿ, ಥಳಿಸಿದ್ದಾರೆ’ ಎಂದು ಆತನ ತಂದೆ ಆರೋಪಿಸಿದ್ದಾರೆ.
‘ತರಗತಿಗೂ ಹೋಗದೆ ತಂದೆಗೆ ದೂರವಾಣಿಯಲ್ಲಿ ಹಲ್ಲೆಯ ವಿಷಯ ತಿಳಿಸಿ, ಮನೆಗೆ ವಾಪಸ್ ಆಗಿದ್ದ ಅರ್ನವ್ ಬೆಡ್ಶೀಟ್ನಿಂದ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ ಸಂಜೆ ಮನೆಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಂದೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಕಲ್ಯಾಣ್ ಗೇಟ್ ಎಸಿಪಿ ಮಾಹಿತಿ ನೀಡಿದ್ದಾರೆ.