ADVERTISEMENT

ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಉಚಿತ ಬಿರಿಯಾನಿ!

ಅರ್ಜುನ್ ರಘುನಾಥ್
Published 16 ಜುಲೈ 2021, 12:52 IST
Last Updated 16 ಜುಲೈ 2021, 12:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 99.47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂದರೆ ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ.

ಅಂತವರ ಮನೋಬಲವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೆರವು ನೀಡಲು ಮುಂದಾಗಿರುವ ಕೆಲವು ಉದ್ಯಮಿಗಳು, ಉಚಿತ ಬಿರಿಯಾನಿ ಹಾಗೂ ಹೋಟೆಲ್ ವಾಸದ ಕೊಡುಗೆಯನ್ನು ಮುಂದಿಟ್ಟಿದ್ದಾರೆ.

ತಮಿಳುನಾಡಿನ ಕೊಡೈಕೆನಾಲ್‌ನಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ನಡೆಸುತ್ತಿರುವ ಕಲ್ಲಿಕೋಟೆ ಮೂಲದ ಸುಧೀಶ್ ಎಂಬವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ವಾಸದ ಕೊಡುಗೆ ಮುಂದಿರಿಸಿದ್ದಾರೆ.

ADVERTISEMENT

ಕೊಚ್ಚಿ ಮೂಲದ ಇನ್ನೊಬ್ಬರು, ಫೇಲ್ ಆದ ವಿದ್ಯಾರ್ಥಿಗಳಿಗೆ ಉಚಿತ ಬಿರಿಯಾನಿ ಆಫರ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸುಧೀಶ್, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅನೇಕ ಮಕ್ಕಳು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮೂಲಕ ಸಂಭ್ರಮಿಸುತ್ತಾರೆ. ಆದರೆ ಫೇಲ್ ಆದ ವಿದ್ಯಾರ್ಥಿಗಳ ಮನೋಸ್ಥಿತಿ ಹೇಗಿರಬಹುದು? ಇದುವೇ ನನಗೆ ಈ ರೀತಿಯಾಗಿ ಯೋಚಿಸಲು ಪ್ರೇರೇಪಿಸಿದೆ. ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳಿಂದ ಅನೇಕ ಕರೆಗಳು ಬರುತ್ತಿವೆ ಎಂದಿದ್ದಾರೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳು ಕಲಿಕಾ ತೊಂದರೆಗಳಿಂದ ಬಳಲುತ್ತಿದ್ದಾರೆ. ಫೇಲ್ ಆದ ಅನೇಕ ವಿದ್ಯಾರ್ಥಿಗಳ ಮನೆಗಳಲ್ಲಿನ ಪರಿಸ್ಥಿತಿ ಕಲಿಕೆಗೆ ಪೂರಕವಾಗಿಲ್ಲ ಎಂದು ಅಲಪ್ಪುಳ ಜಿಲ್ಲೆಯ ಶಿಕ್ಷಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಕೇರಳದಲ್ಲಿ 4.19 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, 2,236 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.

ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ವೈಫಲ್ಯತೆಗೆ ಕಾರಣಗಳನ್ನು ಕಂಡುಹಿಡಿಯಲು ಪ್ರಯತ್ನ ನಡೆಯುತ್ತಿದೆ. ಅದೇ ಹೊತ್ತಿಗೆ ಉನ್ನತ ವ್ಯಾಸಂಗಕ್ಕೆ ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟದ ಬಗ್ಗೆಯೂ ಕಳವಳ ವ್ಯಕ್ತವಾಗಿದೆ.

ಕೋವಿಡ್ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆಗಳು ಹಾಗೂ ಮೌಲ್ಯಮಾಪನದಲ್ಲಿ ಉದಾರ ನೀತಿಯನ್ನು ಅನುಸರಿಸಲಾಗಿತ್ತು. ಇದರಿಂದ ಮೊದಲ ಬಾರಿಗೆ ರಾಜ್ಯದಲ್ಲಿ ಗರಿಷ್ಠ ಮಟ್ಟದ ಫಲಿತಾಂಶ ದಾಖಲಾಗಲು ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.