ಮುಂಬೈ: ಆತ್ಮನಿರ್ಭರ ನೀತಿಯಡಿ ನಿರ್ಮಾಣಗೊಂಡ ‘ಅರ್ಣಾಲಾ’ ಜಲಾಂತರ್ಗಾಮಿಯು ಭಾರತೀಯ ನೌಕಾಪಡೆಗೆ ಬುಧವಾರ ಸೇರ್ಪಡೆಗೊಂಡಿತು.
ಶತ್ರುಗಳ ದಾಳಿಯನ್ನು ತಡೆಗಟ್ಟಬಹುದಾದ ಸಾಮರ್ಥ್ಯ ಹೊಂದಿರುವ ಭಾರತೀಯ ನೌಕಾಪಡೆಯ ಮೊದಲ ಜಲಾಂತರ್ಗಾಮಿ ಇದು. ಶತ್ರು ದೇಶಗಳ ಜಲಾಂತರ್ಗಾಮಿಗಳ ಚಲನವಲನವನ್ನು ಪತ್ತೆ ಹಚ್ಚುವ ಜೊತೆಗೆ ಅವನ್ನು ತಟಸ್ಥಗೊಳಿಸುವ ದಕ್ಷತೆಯನ್ನು ಹೊಂದಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಐತಿಹಾಸಿಕ ಕೋಟೆಯ ಹೆಸರನ್ನು ಹೊಂದಿರುವ ಈ ಅತ್ಯಾಧುನಿಕ ಜಲಾಂತರ್ಗಾಮಿಯನ್ನು ಕೋಲ್ಕತ್ತ ಮೂಲದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಎಂಜಿನಿಯರ್ಸ್ ಲಿಮಿಟೆಡ್ (ಜಿಆರ್ಎಸ್ಇ) ನಿರ್ಮಿಸಿದೆ.
ಶತ್ರುಗಳ ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಿಗಾಗಿಯೇ ಡೀಸೆಲ್ ಎಂಜಿನ್ ಹಾಗೂ ವಾಟರ್ ಜೆಟ್ನ ಸಂಯೋಜನೆಯೊಂದಿಗೆ ವಿನ್ಯಾಸಗೊಳಿಸಲಾಗಿರುವ ಈ ಯುದ್ಧನೌಕೆಯನ್ನು ವಿಶಾಖಪಟ್ಟಣಂನ ನೌಕಾನೆಲೆಯಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್ ಸಮ್ಮುಖ ನೌಕಾಪಡೆಗೆ ನಿಯೋಜಿಸಲಾಯಿತು.
ಸುಲ್ತಾನ್ ಮಹಮೂದ್ ಬೆಗಡಾ ಅವರು ಮಹಾರಾಷ್ಟ್ರದ ಕರಾವಳಿಯ ಕೊಂಕಣ ತೀರದಲ್ಲಿರುವ ವಸಯೀ– ವಿರಾರ್ ದ್ವೀಪದಲ್ಲಿ 1516ರಲ್ಲಿ ಕಟ್ಟಿಸಿದ ಕೋಟೆಯಲ್ಲಿ ಮೊಘಲರು, ಮರಾಠರು, ಪೋರ್ಚುಗೀಸರು, ಪೇಶ್ವೆಗಳು ಸೇರಿದಂತೆ ಇತರರು ಆಳ್ವಿಕೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.