
ವಿಶೇಷ ಪೀಠ ರಚಿಸಲು ಸುಪ್ರೀಂ ನಿರ್ದೇಶನ
ನವದೆಹಲಿ: ಡಿಜಿಟಲ್ ಅರೆಸ್ಟ್ ಪ್ರಕರಣಗಳ ಸಂಬಂಧ ಸಕಾಲಿಕ ಕ್ರಮ ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತು ಇತರ ಬ್ಯಾಂಕುಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ.
ಡಿಜಿಟಲ್ ವಂಚನೆಗಳಿಂದ ₹54,000 ಕೋಟಿಗೂ ಹೆಚ್ಚು ಹಣವನ್ನು ದೋಚಿರುವುದನ್ನು ಸಂಪೂರ್ಣ ದರೋಡೆ ಅಥವಾ ಡಕಾಯಿತಿ ಪ್ರಕರಣ ಎಂದು ಕರೆದ ಸುಪ್ರೀಂ ಕೋರ್ಟ್, ಬ್ಯಾಂಕ್ ಅಧಿಕಾರಿಗಳ ಸಂಭಾವ್ಯ ಪಿತೂರಿ ಅಥವಾ ನಿರ್ಲಕ್ಷ್ಯದಿಂದ ಇಂತಹ ಘಟನೆಗಳು ಸಂಭವಿಸಿವೆ ಎಂದು ಹೇಳಿದೆ.
ಅಂತಹ ಪ್ರಕರಣಗಳನ್ನು ಪರಿಹರಿಸಲು ಆರ್ಬಿಐ, ಬ್ಯಾಂಕುಗಳು ಮತ್ತು ದೂರಸಂಪರ್ಕ ಇಲಾಖೆಯಂತಹ ಪಾಲುದಾರರೊಂದಿಗೆ ಸಮಾಲೋಚಿಸಿ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು ರೂಪಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ಎನ್.ವಿ ಅಂಜಾರಿಯಾ ಅವರನ್ನೊಳಗೊಂಡ ಪೀಠವು, ಡಿಜಿಟಲ್ ವಂಚನೆಯಿಂದ ವಂಚಿಸಲ್ಪಟ್ಟ ಮೊತ್ತವು ಅನೇಕ ಸಣ್ಣ ರಾಜ್ಯಗಳ ಬಜೆಟ್ಗಿಂತ ಹೆಚ್ಚಾಗಿದೆ ಎಂದು ಹೇಳಿದೆ.
ಡಿಜಿಟಲ್ ವಂಚನೆ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಂತರ-ಇಲಾಖೆಯ ಸಂಸ್ಥೆಗಳು ಭಾರತದಾದ್ಯಂತ ಆರ್ಬಿಐ ರೂಪಿಸಿದ ಎಸ್ಒಪಿಯನ್ನು ಔಪಚಾರಿಕವಾಗಿ ಅಳವಡಿಸಿಕೊಳ್ಳಲು ಮತ್ತು ಕಾರ್ಯಗತಗೊಳಿಸಲು ನಾವು ಕೇಂದ್ರಕ್ಕೆ ನಿರ್ದೇಶಿಸುತ್ತೇವೆ ಎಂದಿದೆ.
ಅಲ್ಲದೇ ಡಿಜಿಟಲ್ ಅರೆಸ್ಟ್ ಪ್ರಕರಣಗಳನ್ನು ಪತ್ತೆಹಚ್ಚಲು ಸಿಬಿಐಗೆ ನಿರ್ದೇಶನ ನೀಡಿದ ಪೀಠ, ಅಂತಹ (ಡಿಜಿಟಲ್ ಅರೆಸ್ಟ್) ಪ್ರಕರಣಗಳಲ್ಲಿ ತನಿಖೆ ಮುಂದುವರಿಸಲು ಫೆಡರಲ್ ತನಿಖಾ ಸಂಸ್ಥೆಗೆ ಅನುಮತಿ ನೀಡುವಂತೆ ಗುಜರಾತ್ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿದೆ.
ಡಿಜಿಟಲ್ ಅರೆಸ್ಟ್ ಪ್ರಕರಣಗಳಲ್ಲಿ ಪರಿಹಾರಕ್ಕಾಗಿ ಚೌಕಟ್ಟನ್ನು ರೂಪಿಸಲು ಆರ್ಬಿಐ, ದೂರಸಂಪರ್ಕ ಇಲಾಖೆ ಮತ್ತು ಇತರರು ಜಂಟಿಯಾಗಿ ಸಭೆ ನಡೆಸುವಂತೆಯೂ ಕೋರ್ಟ್ ಹೇಳಿದೆ. ಜತೆಗೆ ಡಿಜಿಟಲ್ ಅರೆಸ್ಟ್ ಬಲಿಪಶುಗಳಿಗೆ ಪರಿಹಾರ ನೀಡಲು ಪ್ರಾಯೋಗಿಕ, ಉದಾರವಾದ ವಿಧಾನಗಳ ಅಗತ್ಯವಿದೆ ಎಂದೂ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.