ADVERTISEMENT

ಘನ ತ್ಯಾಜ್ಯ ನಿರ್ವಹಣೆ: ದೇಶದಾದ್ಯಂತ ಏಕರೂಪ ವ್ಯವಸ್ಥೆ ಜಾರಿಗೆ SC ಮಾರ್ಗಸೂಚಿ

ಎಸ್‌ಡಬ್ಲ್ಯುಎಂ ನಿಯಮಗಳ (2026) ಕಟ್ಟುನಿಟ್ಟಿನ ಜಾರಿ ಅಗತ್ಯ

ಪಿಟಿಐ
Published 21 ಫೆಬ್ರುವರಿ 2026, 15:37 IST
Last Updated 21 ಫೆಬ್ರುವರಿ 2026, 15:37 IST
<div class="paragraphs"><p>ತ್ಯಾಜ್ಯ ನಿರ್ವಹಣೆ</p></div>

ತ್ಯಾಜ್ಯ ನಿರ್ವಹಣೆ

   

ನವದೆಹಲಿ: ದೇಶದಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು (ಎಸ್‌ಎಂಡಬ್ಲ್ಯು) ಮನಸ್ಸಿಗೆ ಬಂದಂತೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಈ ಕುರಿತು ದೇಶದಾದ್ಯಂತ ಏಕರೂಪ ವ್ಯವಸ್ಥೆ ಜಾರಿಗೊಳಿಸಲು ಕೆಲ ನಿರ್ದೇಶನಗಳನ್ನು ನೀಡಿದೆ.  

ಸ್ವಚ್ಛ ಮತ್ತು ಆರೋಗ್ಯಕರ ಪರಿಸರ ಹೊಂದುವ ಹಕ್ಕನ್ನು ಜೀವಿಸುವ ಹಕ್ಕಿನಿಂದ ಬೇರ್ಪಡಿಸಲು ಆಗದು ಎಂದಿರುವ ಸುಪ್ರೀಂ ಕೋರ್ಟ್‌, ‘ಘನತ್ಯಾಜ್ಯ ವಿಲೇವಾರಿಯನ್ನು ನಿರ್ಲಕ್ಷಿಸುವುದು ಆರ್ಥಿಕತೆಗಷ್ಟೇ ಅಲ್ಲದೇ, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ’ ಎಂದಿದೆ.  

ADVERTISEMENT

ಭೋಪಾಲ್‌ ಮುನ್ಸಿಪಲ್‌ ಕಾರ್ಪೋರೇಷನ್‌ಗೆ ಸಂಬಂಧಿಸಿದಂತೆ ಹಸಿರು ನ್ಯಾಯಪೀಠ (ಎನ್‌ಜಿಟಿ) ಹೊರಡಿಸಿದ್ದ ಎರಡು ಆದೇಶಗಳಿಗೆ ಸಂಬಂಧಿಸಿದ ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಂಕಜ್‌ ಮಿತ್ತಲ್‌ ಮತ್ತು ಎಸ್‌.ವಿ.ಎನ್‌.ಭಟ್ಟಿ ಅವರ ಪೀಠ, ಈ ವರ್ಷದ ಏಪ್ರಿಲ್‌ 1ರಿಂದ ಜಾರಿಯಾಗಲಿರುವ ಎಸ್‌ಡಬ್ಲ್ಯುಎಂ ಹೊಸ ನಿಯಮಗಳ (2026) ಕಟ್ಟುನಿಟ್ಟಿನ ಜಾರಿಗೆ ನಿರ್ದೇಶಿಸಿದೆ. ಅಲ್ಲದೆ ಈ ನಿಟ್ಟಿನಲ್ಲಿ ಕಾರ್ಯಾಂಗದ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿ ಹೊರಡಿಸಿದೆ.

ಮಾರ್ಗಸೂಚಿಯಲ್ಲಿ ಏನೇನಿದೆ?

* ತ್ಯಾಜ್ಯ ಮುಕ್ತ ಭಾರತವನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ಭಾಗಿದಾರರ ಕರ್ತವ್ಯ. ತ್ಯಾಜ್ಯ ಮೂಲದಲ್ಲಿಯೇ ಪ್ರತ್ಯೇಕವಾಗಬೇಕು

* ಪರಿಸರ ರಕ್ಷಣೆ ಮತ್ತು ಜನರ ಯೋಗಕ್ಷೇಮ ಖಚಿತಪಡಿಸಿಕೊಳ್ಳುವುದು ರಾಜ್ಯ ಸರ್ಕಾರಗಳ ಜವಾಬ್ದಾರಿ

* ತ್ಯಾಜ್ಯ ವಿಂಗಡಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜನಪ್ರತಿನಿಧಿಗಳು, ಕೌನ್ಸಿಲರ್‌ಗಳು, ಮೇಯರ್‌ಗಳು, ಅಧ್ಯಕ್ಷರುಗಳು ಪ್ರಮುಖ ಸಹಾಯಕರಾಗಿರುತ್ತಾರೆ

* ಘನ ತ್ಯಾಜ್ಯ ನಿರ್ವಹಣೆಯ ಮೂಲಸೌಕರ್ಯದ ಶೋಧನೆ ಜಿಲ್ಲಾಧಿಕಾರಿಗಳ ಮೂಲಕ ನಡೆಯಬೇಕು. ಅಲ್ಲಿ ಗುರುತಿಸಲಾದ ಸಮಸ್ಯೆಗಳು ಮತ್ತು ತೆಗೆದುಕೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಕಾಲ ಕಾಲಕ್ಕೆ ವರದಿ ನೀಡಬೇಕು  

* ನಗರ ಅಥವಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆ, ಕಾರ್ಯಗತಗೊಳಿಸುವಿಕೆ ಮತ್ತು ನಿರ್ವಹಣೆಯ ಮೇಲ್ವಿಚಾರಣೆಯ ಜವಾಬ್ದಾರಿ ಜಿಲ್ಲಾಧಿಕಾರಿಗೆ

* ಘನತ್ಯಾಜ್ಯ ವಿಂಗಡಣೆಗೆ (ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ) ಅಗತ್ಯವಿರುವ ಮೂಲ ಸೌಕರ್ಯವನ್ನು ಗುರುತಿಸಿ, ತ್ವರಿತವಾಗಿ ಕಾರ್ಯಾರಂಭ ಆಗುವಂತೆ ಮಾಡುವ ಜವಾಬ್ದಾರಿ ಮಾಲಿನ್ಯ ನಿಯಂತ್ರಣ ಮಂಡಳಿಯದ್ದು

* ಘನ ತ್ಯಾಜ್ಯ ನಿರ್ವಹಣಾ ಪದ್ಧತಿಗಳ ಕುರಿತು ಶಾಲಾ ಪಠ್ಯಗಳಲ್ಲಿ ವಿಷಯ ಸೇರಿಸಲಾಗಿದೆಯೇ ಎಂಬುದನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಖಚಿತಪಡಿಸಿಕೊಳ್ಳಬೇಕು

* ಎಸ್‌ಡಬ್ಲ್ಯುಎಂನ 2026 ನಿಯಮಗಳ ಕುರಿತ ಸಾರಾಂಶವನ್ನು ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಸ್ಥಳೀಯ ಭಾಷೆಗಳಿಗೆ ಅನುವಾದಿಸಬೇಕು

* ಈ ನಿಯಮಗಳನ್ನು ಪಾಲಿಸಲು ವಿಫಲವಾದರೆ ಅದು ಆಡಳಿತಾತ್ಮಕ ಲೋಪ ಆಗುತ್ತದೆ. ಅದರ ಜತೆಗೆ ಸ್ಥಳೀಯ ಅಧಿಕಾರಿಗಳ ವಿರುದ್ಧ ತಕ್ಷಣವೇ ದಂಡ ವಿಧಿಸುವುದೂ ಸೇರಿದಂತೆ ಮೂರು ಹಂತದ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ

* ನಿರಂತರ ನಿರ್ಲಕ್ಷ್ಯ ವಹಿಸಿದರೆ, ಪರಿಸರ ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್‌ ಮೊಕದ್ದಮೆಗೂ ಕಾರಣವಾಗುತ್ತದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.