
ಗುರುವಾಯೂರು ದೇಗುಲ
ನವದೆಹಲಿ: ಡಿ.1ರಂದು ಇರುವ ಏಕಾದಶಿಯಂದು ಕೇರಳದ ಗುರುವಾಯೂರು ಕೃಷ್ಣ ದೇಗುಲದಲ್ಲಿ ಸಂಪ್ರದಾಯದಂತೆ ‘ಉದಯಾಸ್ತಮಾನ ಪೂಜೆ’ಯನ್ನು ಕೈಗೊಳ್ಳಬೇಕು ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಗುರುವಾಯೂರಿನಲ್ಲಿ ಏಕಾದಶಿಯಂದು ಉದಯಾಸ್ತಮಾನ ಪೂಜೆಯನ್ನು ಮಾಡಲಾಗುತ್ತದೆ. ಅಂದರೆ ಈ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಪೂಜೆಗಳನ್ನು ಮಾಡಲಾಗುತ್ತದೆ. ಆದರೆ, ಅಂದು ದೇಗುಲಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ಕೊಡುವ ಕಾರಣ, ಜನರ ನಿರ್ವಹಣೆ ಕಷ್ಟವಾಗಲಿದೆ ಎಂದು ದೇಗುಲದ ಆಡಳಿತ ಮಂಡಳಿ ಉದಯಾಸ್ತಮಾನ ಪೂಜೆಯನ್ನು ಕೈಬಿಡಲು ನಿರ್ಧರಿಸಿತ್ತು. ಜತೆಗೆ ಅಂದು ಹೆಚ್ಚಿನ ಸಂಖ್ಯೆಯ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲು ನಿರ್ಧರಿಸಿತ್ತು.
ಇದನ್ನು ಪ್ರಶ್ನಿಸಿ, ಪಿ. ಸಿ. ಹ್ಯಾರಿ ಎನ್ನುವವರು ಮತ್ತು ದೇವಾಲಯದಲ್ಲಿ ಪುರೋಹಿತ ಹಕ್ಕುಗಳನ್ನು ಹೊಂದಿರುವ ಕುಟುಂಬದ ಇತರ ಸದಸ್ಯರು, ‘ಏಕಾದಶಿ ದೇವಾಲಯದ ಪ್ರಮುಖ ಹಬ್ಬವಾಗಿದೆ. ಉದಯಾಸ್ತಮಾನ ಪೂಜೆಯನ್ನು 1972 ರಿಂದ ಏಕಾದಶಿ ದಿನದಂದು ನಡೆಸಲಾಗುತ್ತಿದೆ ಎಂಬುದು ಒಪ್ಪಿಕೊಂಡ ಸತ್ಯವಾದರೂ, ವಾಸ್ತವದಲ್ಲಿ ಅದನ್ನು ಹಿಂದಿನಿಂದಲೂ ನಡೆಸಲಾಗುತ್ತಿದೆ. ಅಲ್ಲದೆ ಈ ಸಂಪ್ರದಾಯವನ್ನು ಆದಿ ಶಂಕರಾಚಾರ್ಯರು ಜಾರಿಗೆ ತಂದಿದ್ದು ಎನ್ನಲಾಗಿದೆ’ ಎಂದು ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ ಬಿಷ್ಣೋಯಿ, ಈ ಪೂಜೆಯನ್ನು 1972ರಿಂದಲೂ ನಡೆಸಲಾಗುತ್ತಿದೆ ಎನ್ನುವುದನ್ನು ಪರಿಗಣಿಸಿ, ಉದಯಾಸ್ತಮಾನ ಪೂಜೆಯನ್ನು ನಿಲ್ಲಿಸಕೂಡದು ಎಂದು ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.