
ನವದೆಹಲಿ: ‘ನಾನು ಮನವಿ ಮಾಡಿದ್ದಕ್ಕಿಂತ ಹೆಚ್ಚಿಗೆ ಕೂದಲು ಕತ್ತರಿಸಿದ್ದರಿಂದ ನನ್ನ ವೃತ್ತಿಗೆ ತೊಂದರೆಯಾಗಿ ನನಗೆ ನಷ್ಟವಾಗಿದೆ. ಆದ್ದರಿಂದ ನನಗೆ ₹2 ಕೋಟಿ ಪರಿಹಾರ ಕೊಡಿಸಿ’ ಎಂಬ ಮಹಿಳೆಯ ಬೇಡಿಕೆಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ‘ಇಷ್ಟೊಂದು ದೊಡ್ಡ ಮೊತ್ತ ಆಗ್ರಹಿಸುತ್ತಿರುವುದಕ್ಕೆ ಆಧಾರವಿಲ್ಲ’ ಎಂದಿದೆ.
ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರ ಪೀಠವು ಪರಿಹಾರ ಮೊತ್ತವನ್ನು ₹25 ಲಕ್ಷಕ್ಕೆ ಇಳಿಕೆ ಮಾಡಿದೆ. ‘ದೂರುದಾರರು ಮನಸ್ಸಿಗೆ ಬಂದಂತೆ ಪರಿಹಾರ ರೂಪದಲ್ಲಿ ಕೋಟ್ಯಂತರ ರೂಪಾಯಿ ಕೇಳಬಾರದು. ಕೋಟಿಗಟ್ಟಲೆ ಪರಿಹಾರ ಕೇಳುತ್ತಿದ್ದೀರಿ ಎಂದಾದರೆ ಅದಕ್ಕೆ ತಕ್ಕ ದಾಖಲೆಗಳು, ಸಾಕ್ಷ್ಯಗಳು ಇರಬೇಕು’ ಎಂದು ಪೀಠ ಹೇಳಿದೆ. ಫೆ.6ರಂದು ಪೀಠವು ಈ ತೀರ್ಪು ನೀಡಿದೆ.
‘ದೊಡ್ಡ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಡಬೇಕಿದ್ದರೆ, ಇಷ್ಟು ದೊಡ್ಡ ಮೊತ್ತದ ಪರಿಹಾರ ಯಾಕೆ ಬೇಕು ಎಂಬುದನ್ನು ಸಾಬೀತು ಮಾಡಬೇಕು. ಊಹೆಗಳ ಮೇಲೆ, ದಾಖಲೆಗಳ ಛಾಯಾಚಿತ್ರಗಳನ್ನು ಮಾತ್ರವೇ ಇಟ್ಟುಕೊಂಡು ಪರಿಹಾರ ಕೇಳಬಾರದು. ತೀರ್ಪು ನೀಡುವಲ್ಲಿ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಎಡವಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.