
ಸುಪ್ರೀಂ ಕೋರ್ಟ್ ಹಾಗೂ ಬೀದಿ ನಾಯಿಗಳು
ನಾಯಿ ಹಾವಳಿ ತಡೆಗೆ ನಿಯಮಗಳು ಅನುಷ್ಠಾನಗೊಳ್ಳುತ್ತಿಲ್ಲ: ಸುಪ್ರೀಂ | ನಾವು ಕಣ್ಣುಮುಚ್ಚಿ ಕೂರಬೇಕೆಂದು ನೀವು ಬಯಸುತ್ತೀರಿ: ನ್ಯಾ. ಮೆಹ್ತಾ
ನವದೆಹಲಿ: ನಾಯಿ ಕಡಿತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಭಾರಿ ಪ್ರಮಾಣದ ಪರಿಹಾರ ನೀಡಲು ರಾಜ್ಯಗಳಿಗೆ ಸೂಚಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕಟುವಾಗಿ ಹೇಳಿತು.
ಬೀದಿನಾಯಿ ಹಾವಳಿಗೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ.ಅಂಜಾರಿಯಾ ಅವರ ನೇತೃತ್ವದ ನ್ಯಾಯಪೀಠವು, ಕಳೆದ ಐದು ವರ್ಷಗಳಿಂದ ಬೀದಿನಾಯಿ ಹಾವಳಿ ತಡೆಗಾಗಿ ನಿಯಮಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿತು.
ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು, ‘ನಾಯಿ ಕಡಿತದಿಂದ ಜನರಿಗೆ ಗಾಯವಾದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ರಾಜ್ಯ ಸರ್ಕಾರಗಳಿಂದ ಭಾರಿ ಪರಿಹಾರ ಕೇಳಬೇಕಾಗುತ್ತದೆ. ಅಂಥ ಪ್ರಕರಣಗಳಲ್ಲಿ ನಾಯಿಗಳಿಗೆ ಆಹಾರ ನೀಡುವವರು ಮತ್ತು ನಾಯಿ ಪ್ರೇಮಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಬೀದಿನಾಯಿಗಳನ್ನು ಅಷ್ಟೊಂದು ಪ್ರೀತಿಸುವವರು, ಅವುಗಳನ್ನು ಮನೆಗೆ ಏಕೆ ಕೊಂಡೊಯ್ಯುವುದಿಲ್ಲ? ಆ ನಾಯಿಗಳೇಕೆ ಅಲೆದಾಡುತ್ತಾ ಜನರನ್ನು ಬೆದರಿಸುತ್ತವೆ ಮತ್ತು ಕಚ್ಚುತ್ತವೆ’ ಎಂದು ಪ್ರಶ್ನಿಸಿದರು.
ನ್ಯಾ. ವಿಕ್ರಮ್ ನಾಥ್ ಅವರ ಮಾತಿಗೆ ದನಿಗೂಡಿಸಿದ ನ್ಯಾಯಮೂರ್ತಿ ಮೆಹ್ತಾ ಅವರು, ‘ನಾಯಿಯೊಂದು ಒಂಬತ್ತು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದಾಗ ಯಾರನ್ನು ಹೊಣೆಗಾರರನ್ನಾಗಿಸುವುದು? ನಾಯಿಗೆ ಅನ್ನ ಹಾಕಿದ ಸಂಸ್ಥೆಯನ್ನೇ? ಸಮಸ್ಯೆ ಹೀಗಿದ್ದರೂ ನಾವು ಕಣ್ಣುಮುಚ್ಚಿ ಕೂರಬೇಕೆಂದು ನೀವು ಬಯಸುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.
‘ಗುಜರಾತ್ನ ವಕೀಲರೊಬ್ಬರಿಗೆ ಉದ್ಯಾನವನದಲ್ಲಿ ನಾಯಿ ಕಚ್ಚಿತ್ತು. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಆ ನಾಯಿಯನ್ನು ಸೆರೆಹಿಡಿಯಲು ಯತ್ನಿಸಿದ್ದರು. ನಾಯಿ ಪ್ರೇಮಿಯಾಗಿದ್ದ ಆ ವಕೀಲ, ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದರು. ಇದು ನಮ್ಮ ದುರ್ದೈವ’ ಎಂದು ನ್ಯಾಯಪೀಠ ಘಟನೆಯನ್ನು ಮೆಲುಕುಹಾಕಿತು.
‘ಬೀದಿಗಳನ್ನು ನಾಯಿಗಳಿಂದ ಮುಕ್ತಗೊಳಿಸಿ’ ಎಂದು ನವೆಂಬರ್ 7ರಂದು ನೀಡಿದ್ದ ಆದೇಶವನ್ನು ಪರಿಷ್ಕರಿಸುವಂತೆ ಕೋರಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ನಾಯಿ ಪ್ರೇಮಿಗಳ ವಾದ ಏನು?:
ಹಿರಿಯ ವಕೀಲ ವಿಕಾಸ್ ಸಿಂಗ್ ಅವರು, ‘2005ರಲ್ಲಿ ಹಾವು ಕಡಿತದಿಂದ 50,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ನಾಯಿ ಕಡಿತವನ್ನು ಪ್ರಾಣಿ ಮತ್ತು ಮಾನವ ಸಂಘರ್ಷವಾಗಿ ಮಾತ್ರ ಕಾಣಬೇಡಿ. ಇಲಿ, ಹೆಗ್ಗಣಗಳ ನಿಯಂತ್ರಣಕ್ಕೆ ನಾಯಿಗಳು ಅವಶ್ಯಕ. ಸುಪ್ರೀಂ ಕೋರ್ಟ್ ಆದೇಶವು ಪರಿಸರ ಸಮತೋಲನವನ್ನು ಕಾಯುವಂತಿರಲಿ. ಪರಿಸರ ವ್ಯವಸ್ಥೆಯಲ್ಲಿ ನಾಯಿಗಳಿಗೆ ಪ್ರಾಮುಖ್ಯವಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಹಿರಿಯ ವಕೀಲೆ ಪಿಂಕಿ ಆನಂದ್ ಅವರು, ‘ಟಿ.ಬಿ ಕಾಯಿಲೆಯನ್ನು ನೀತಿಗಳ ಮೂಲಕ ನಿರ್ಮೂಲನೆ ಮಾಡುತ್ತೇವೆಯೇ ವಿನಾ ಟಿ.ಬಿ ಕಾಯಿಲೆಗೆ ತುತ್ತಾಗಿರುವ ಜನರನ್ನೇ ನಿರ್ಮೂಲನೆ ಮಾಡುವುದಿಲ್ಲ. ನಮ್ಮಲ್ಲಿ ಕೇವಲ 77 ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರಗಳಿವೆ. ಬೀದಿ ನಾಯಿಗಳನ್ನು ಅವುಗಳಿದ್ದ ಜಾಗಗಳಿಗೇ ಮರಳಿಸದಿದ್ದರೆ ಮತ್ತಷ್ಟು ಆಕ್ರಮಣಕಾರಿ ನಾಯಿಗಳು ಆ ಜಾಗಕ್ಕೆ ಬರುತ್ತವೆ’ ಎಂದು ಹೇಳಿದರು.
‘ಕೇಂದ್ರ ರಾಜ್ಯಗಳ ಅಭಿಪ್ರಾಯ ಕೇಳಲು ಅವಕಾಶ ಕೊಡಿ’
‘ಬೀದಿನಾಯಿ ಹಾವಳಿಗೆ ಸಂಬಂಧಿಸಿದಂತೆ ನಾಲ್ಕು ದಿನಗಳಿಂದ ವಿಚಾರಣೆ ನಡೆಸುತ್ತಿದ್ದೇವೆ. ಸಾಮಾಜಿಕ ಕಾರ್ಯಕರ್ತರು ಮತ್ತು ಸರ್ಕಾರೇತರ ಸಂಘಟನೆಗಳು (ಎನ್ಜಿಒ) ಈ ವಿಚಾರದಲ್ಲಿ ಮುಂದುವರಿಯಲು ಅವಕಾಶವನ್ನೇ ನೀಡುತ್ತಿಲ್ಲ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಲೂ ಸಾಧ್ಯವಾಗುತ್ತಿಲ್ಲ’ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು. ‘ಕೇಂದ್ರ ರಾಜ್ಯ ಸರ್ಕಾರಗಳು ಮತ್ತು ಇತರ ಸಂಸ್ಥೆಗಳ ಅಭಿಪ್ರಾಯ ಕೇಳಲು ಆದೇಶ ನೀಡಲು ಅವಕಾಶ ಮಾಡಿಕೊಡಿ. ಕೇಂದ್ರ ಮತ್ತು ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕಿದೆ. ಬೀದಿನಾಯಿ ಹಾವಳಿ ತಡೆಗೆ ಅವುಗಳ ಬಳಿ ಕ್ರಿಯಾ ಯೋಜನೆಗಳಿವೆಯೇ ಎಂದು ತಿಳಿಯಬೇಕಿದೆ. ಶಾಸನಬದ್ಧ ನಿಬಂಧನೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಇದಕ್ಕೆ ಅವಕಾಶ ಮಾಡಿಕೊಡಿ’ ಎಂದು ವಕೀಲರಿಗೆ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.