ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ತನಿಖೆ ಇನ್ನೂ ಮುಂದುವರೆದದ್ದು, ಎಲ್ಲಾ ದಿಕ್ಕುಗಳಲ್ಲಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಕೇಂದ್ರ ತನಿಖಾ ದಳ (ಸಿಬಿಐ) ಸೋಮವಾರ ತಿಳಿಸಿದೆ.
ಸುಶಾಂತ್ ಸಾವಿನ ಬಗ್ಗೆ ಸಿಬಿಐ ನಡೆಸುತ್ತಿರುವ ತನಿಖೆಯು ನಿಜಾಂಶಗಳನ್ನು ಬಿಟ್ಟು ಬೇರೆಯದೇ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಟನ ಕುಟುಂಬದ ವಕೀಲರು ಆರೋಪಿಸಿದ್ದರು.
'ಸುಶಾಂತ್ ಪ್ರಕರಣದ ಗಮನವನ್ನು ಡ್ರಗ್ಸ್ ಪ್ರಕರಣದ ಕಡೆಗೆ ತಿರುಗಿಸಲಾಗುತ್ತಿದೆ. ಇಂದು ಪ್ರಕರಣವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಮಗೆ ತಿಳಿದಿಲ್ಲವಾದ್ದರಿಂದ ನಾವು ಅಸಹಾಯಕರಾಗಿದ್ದೇವೆ. ಇಂದಿನವರೆಗೂ ಸಿಬಿಐ ತನಿಖೆಯಲ್ಲಿ ಯಾವ ಸತ್ಯಾಂಶಗಳು ಕಂಡುಬಂದಿವೆ ಎಂಬುದರ ಬಗ್ಗೆ ಪತ್ರಿಕಾಗೋಷ್ಠಿ ನಡೆಸಲಾಗಿಲ್ಲ' ಎಂದು ವಕೀಲ ವಿಕಾಸ್ ಸಿಂಗ್ ಆಪಾದಿಸಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಬಿಐ, 'ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ವೃತ್ತಿಪರ ತನಿಖೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಎಲ್ಲಾ ಅಂಶಗಳನ್ನು ತೀಷ್ಣವಾಗಿ ಗಮನಿಸಲಾಗುತ್ತಿದೆ. ಮತ್ತು, ಯಾವುದೇ ಅಂಶವನ್ನು ಇಲ್ಲಿಯವರೆಗೆ ತಳ್ಳಿಹಾಕಿಲ್ಲ' ಎಂದು ಸ್ಪಷ್ಟಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.