ಪಾಟ್ನಾ: ಸುಶಾಂತ್ ಸಿಂಗ್ ರಜಪೂತ್ಆತ್ಮಹತ್ಯೆ ಪ್ರಕರಣ ಸಂಬಂಧ, ಬಿಹಾರ ಪೊಲೀಸರ ತಂಡ ಈವರೆಗೆ ಆರು ಮಂದಿಯ ಹೇಳಿಕೆ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ‘ಆತ್ಮಹತ್ಯೆಗೆ ಪ್ರಚೋದನೆ’ ಪ್ರಕರಣದ ತನಿಖೆಗಾಗಿಬಿಹಾರದ ನಾಲ್ವರು ಪೊಲೀಸರ ತಂಡ ಕಳೆದ ಬುಧವಾರ ಮುಂಬೈಗೆ ಆಗಮಿಸಿದೆ.
ಸುಶಾಂತ್ ಸಿಂಗ್ ಸಹೋದರಿ, ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ, ಅಡುಗೆಯವರು, ಸ್ನೇಹಿತರು ಮತ್ತು ಸಹೋದ್ಯೋಗಿಗಳ ವಿಚಾರಣೆಯನ್ನು ನಡೆಸಲಾಗಿದೆ.ಪೊಲೀಸ್ ತಂಡವು ಸುಶಾಂತ್ ಅವರ ಜತೆಗಿದ್ದ ಸಿಬ್ಬಂದಿಯನ್ನು ಪ್ರಶ್ನಿಸುವ ಸಾಧ್ಯತೆಯಿದೆ.
ಸುಶಾಂತ್ ಅವರ ವಿವಿಧ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯಲಾಗಿದ್ದು, ಅವರ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸಲು ಪೊಲೀಸರು ಬ್ಯಾಂಕ್ಗಳಿಗೆ ಭೇಟಿ ನೀಡಿದ್ದರು.
ಈ ಪ್ರಕರಣದಲ್ಲಿ ಮುಂಬೈ ಅಪರಾಧ ವಿಭಾಗದ ನೆರವನ್ನು ಬಿಹಾರ ಪೊಲೀಸರು ಕೋರಿದ್ದಾರೆ.
ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ‘ತನ್ನ ಮಗನನ್ನು ಆತ್ಮಹತ್ಯೆಗೆ ಪ್ರಚೋದಿಸಲಾಗಿದೆ’ ಎಂದು ಆರೋಪಿಸಿ ರಿಯಾ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಪಟ್ನಾದಲ್ಲಿ ಕಳೆದ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
‘ಸಿಬಿಐ ತನಿಖೆಗೆ ಒತ್ತಾಯಿಸಿದರೆ ಸಿ.ಎಂಸ್ಪಂದಿಸಲಿದ್ದಾರೆ’
‘ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅವರ ಕುಟುಂಬದವರು ಒತ್ತಾಯಿಸಿದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಖಂಡಿತವಾಗಿಯೂ ಸ್ಪಂದಿಸಲಿದ್ದಾರೆ’ ಎಂದು ಬಿಹಾರದ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ಝಾ ತಿಳಿಸಿದ್ದಾರೆ.
‘ಸುಶಾಂತ್ ಕುಟುಂಬಕ್ಕೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದ್ದಾರೆ.
‘ಸುಶಾಂತ್ ತಂದೆ ಪಟ್ನಾದಲ್ಲಿ ದೂರು ನೀಡಿದ ನಂತರ ನ್ಯಾಯಯುತ ತನಿಖೆ ಪ್ರಾರಂಭವಾಗಿದೆ. ಮುಂಬೈ ಪೊಲೀಸರು ತನಿಖೆಗೆ ಸೂಕ್ತ ನೆರವು ನೀಡುತ್ತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ತನಿಖೆ ನಡೆಸುವ ನೆಪದಲ್ಲಿ ಮುಂಬೈ ಪೊಲೀಸರು ಫೋಟೊಗೆ ಪೋಸು ನೀಡುತ್ತಾ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆಯೇ ಹೊರತು ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಬಿಹಾರ ಪೊಲೀಸರು ಪ್ರಮಾಣಿಕವಾಗಿ ತನಿಖೆ ನಡೆಸುತ್ತಿದ್ದರೂ, ಅವರ ತನಿಖೆಗೆ ಅಡ್ಡಿ ಉಂಟುಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.