ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ (34) ಸಾವಿನ ಪ್ರಕರಣದ ಸಂಬಂಧ ಸಿಬಿಐ ಅಧಿಕಾರಿಗಳು ಮುಂಬೈನ ರೆಸಾರ್ಟ್ವೊಂದರಲ್ಲಿ ತನಿಖೆ ನಡೆಸಿದ್ದಾರೆ. ಸುಶಾಂತ್ ಕೆಲವು ತಿಂಗಳು ಅದೇ ರೆಸಾರ್ಟ್ನಲ್ಲಿ ಕಳೆದಿದ್ದರು ಎನ್ನಲಾಗಿದೆ.
ಸುಶಾಂತ್ ಅಕೌಂಟಂಟ್ ರಜತ್ ಮೇವಾತಿ, ಸ್ನೇಹಿತ ಸಿದ್ಧಾರ್ಥ್ ಪಿಠಾಣಿ ಹಾಗೂ ಬಾಣಸಿಗ ಸೇರಿದಂತೆ ಮೂವರನ್ನೂ ಸೋಮವಾರ ಸಿಬಿಐ ಸಾಂತಾಕ್ರೂಸ್ನಲ್ಲಿನ ಡಿಆರ್ಡಿಒ ಅತಿಥಿ ಗೃಹಕ್ಕೆ ವಿಚಾರಣೆಗಾಗಿ ಕರೆಸಿಕೊಂಡಿದೆ.
ಸಿಬಿಐ ತಂಡ ಅಂಧೇರಿಯಲ್ಲಿರುವ 'ವಾಟರ್ಸ್ಟೋನ್ ರೆಸಾರ್ಟ್'ನಲ್ಲಿ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನಿಸಿದೆ. ಸುಶಾಂತ್ ಸುಮಾರು 2 ತಿಂಗಳು ಅದೇ ರೆಸಾರ್ಟ್ನಲ್ಲಿ ಉಳಿದಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಬಿಐ ಅಧಿಕಾರಿಗಳು ಭಾನುವಾರ ಸಹ ರೆಸಾರ್ಟ್ಗೆ ತೆರಳಿದ್ದರು. ಆದರೆ, ಅಲ್ಲಿ ರೆಸಾರ್ಟ್ ಸಿಬ್ಬಂದಿ ವಿಚಾರಣೆಗೆ ಸಿಕ್ಕಿರಲಿಲ್ಲ.
ಸುಶಾಂತ್ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ನಿವಾಸದಲ್ಲಿ ಅಡುಗೆ ಮಾಡುತ್ತಿದ್ದ ನೀರಜ್ ಸಿಂಗ್, ಅದೇ ಫ್ಲಾಟ್ನಲ್ಲಿ ವಾಸಿಸುತ್ತಿದ್ದ ಸಿದ್ಧಾರ್ಥ್ ಪಿಠಾಣಿ ಹಾಗೂ ಅಕೌಂಟಂಟ್ ರಜತ್ ಮೇವಾತಿ ಅವರ ವಿಚಾರಣೆ ಮುಂದುವರಿದಿದೆ. ಶನಿವಾರ ಮತ್ತು ಭಾನುವಾರ ಸಹ ವಿಚಾರಣೆ ನಡೆಸಲಾಗಿತ್ತು. ಜೂನ್ 14ರಂದು ಸುಶಾಂತ್ ತಮ್ಮ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಾಗ ಈ ಮೂವರೂ ಅಪಾರ್ಟ್ಮೆಂಟ್ನಲ್ಲಿದ್ದರು.
ಭಾನುವಾರ ಪಿಠಾಣಿ, ನೀರಜ್ ಹಾಗೂ ಸಾವಂತ್ ಅವರನ್ನು ಸಿಬಿಐ ಅಧಿಕಾರಿಗಳು ಡಿಆರ್ಡಿಒ ಅತಿಥಿ ಗೃಹದಲ್ಲಿ ವಿಚಾರಣೆ ನಡೆಸಿ ನಂತರ ಸುಶಾಂತ್ ನಿವಾಸಕ್ಕೆ ಕರೆದೊಯ್ದರು. ಅಲ್ಲಿ ಮೂರು ಗಂಟೆಗಳ ತನಿಖೆ ನಡೆಸಿ, ಮತ್ತೆ ಅತಿಥಿ ಗೃಹದಲ್ಲಿ ಅವರ ವಿಚಾರಣೆ ಮುಂದುವರಿಸಿದ್ದರು. ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ ಸಿಬಿಐ ತಂಡ ಸುಶಾಂತ್ ನಿವಾಸದಲ್ಲಿ ತನಿಖೆ ನಡೆಸಿದೆ.
ಸುಶಾಂತ್ ಅಸಹಜ ಸಾವಿಗೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್ಐಆರ್ ಆಧರಿಸಿ ನಡೆಸಲಾಗುತ್ತಿರುವ ಸಿಬಿಐ ತನಿಖೆಗೆ, ಸುಪ್ರೀಂ ಕೋರ್ಟ್ ಕಳೆದ ವಾರ ಸಮ್ಮತಿ ಸೂಚಿಸಿದೆ. ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ರಿಯಾ ಮನವಿ ಸಲ್ಲಿಸಿದ್ದರು.
ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರಿಗೆ ಸಿಬಿಐನಿಂದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಬಂದಿಲ್ಲ ಎಂದು ರಿಯಾ ಪರ ವಕೀಲರು ಹೇಳಿದ್ದಾರೆ. ಸಿಬಿಐ ವಿಚಾರಣೆಗೆ ಕರೆದರೆ ಹಾಜರಾಗುವುದಾಗಿ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.