ADVERTISEMENT

ಹಣ ಇರಿಸಿರುವ 11 ಮಂದಿ ಭಾರತೀಯ ಖಾತೆದಾರರಿಗೆ ಸ್ವಿಸ್ ಬ್ಯಾಂಕ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 27 ಮೇ 2019, 13:03 IST
Last Updated 27 ಮೇ 2019, 13:03 IST
   

ನವದೆಹಲಿ:ಹಣದ ಮೂಲ, ಹೆಸರು ಸೇರಿದಂತೆ ಇನ್ನಿತರೆ ಮಾಹಿತಿ ನೀಡುವಂತೆ ಹಣ ಇರಿಸಿರುವ 11 ಮಂದಿ ಭಾರತೀಯ ಶ್ರೀಮಂತರಿಗೆ ಸ್ವಿಸ್ ಬ್ಯಾಂಕ್‌ನೋಟಿಸ್ನೀಡಿದೆ.

ಈ 11 ಮಂದಿ ಸೇರಿದಂತೆ ಕಳೆದ ಮಾರ್ಚ್‌‌ನಿಂದ ಇಲ್ಲಿಯವರೆಗೆ 25 ಮಂದಿಗೆ ನೋಟೀಸ್ ನೀಡಿದಂತಾಗಿದೆ. ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇರಿಸಿರುವ ಭಾರತೀಯರ ವಿವರಗಳನ್ನು ನೀಡುವಂತೆ ಸಿಬಿಐ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ಸ್ವಿಸ್ ಸರ್ಕಾರದ ಮೇಲೆ ಒತ್ತಡ ಹೇರಿದ ಫಲವಾಗಿ ಸ್ವಿಡ್ಜರ್‌‌ಲ್ಯಾಂಡ್ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಈಗಾಗಲೇ ಕೆಲ ಮಂದಿ ತಮ್ಮ ಹಣದ ಮೂಲ ಹಾಗೂ ಇತರೆ ಹೆಸರು ವಿಳಾಸಗಳನ್ನು ನೀಡಿರುವುದಾಗಿ ಸ್ವಿಡ್ಜರ್‌‌ಲ್ಯಾಂಡ್ ಹೇಳಿದೆ.

11 ಮಂದಿಯಲ್ಲಿ ಇಬ್ಬರ ಹೆಸರನ್ನು ಮಾತ್ರ ಬಹಿರಂಗಪಡಿಸಿರುವ ಬ್ಯಾಂಕ್, ಉಳಿದ 9 ಮಂದಿಯ ಹೆಸರಿನ ಬದಲಾಗಿ ಅವರ ಹೆಸರಿನ ಇನಿಷಿಯಲ್‌‌ಗಳು ಹಾಗೂ ಹುಟ್ಟಿದ ದಿನಾಂಕವನ್ನು ಮಾತ್ರ ತಿಳಿಸಿದೆ. ಕೃಷ್ಣ ಭಗವಾನ್ ರಾಮಚಂದ್ (ಹುಟ್ಟಿದ ದಿನಾಂಕ ಮೇ 1949) ಕಲ್ಪೇಶ್ ಹರ್ಷದ್ ಕಿನರಿವಾಲಾ(ಹುಟ್ಟಿದ ದಿನಾಂಕ ಸೆಪ್ಟೆಂಬರ್ 1949) ಪೂರ್ಣ ಹೆಸರು ಹೊಂದಿರುವವರು.

ADVERTISEMENT

ಉಳಿದ 9 ಮಂದಿ ಹೆಸರಿನ ಮೊದಲಕ್ಷರಗಳನ್ನು ಮಾತ್ರ ನೋಟೀಸ್ನಲ್ಲಿ ತಿಳಿಸಲಾಗಿದೆ. ಶ್ರೀಮತಿ ಎಎಸ್ಬಿಕೆ (ನವೆಂಬರ್ 24, 1944) ಶ್ರೀ ಎಬಿಕೆಐ (ಹುಟ್ಟಿದ ದಿನಾಂಕ ಜುಲೈ 9, 1944), ಶ್ರೀಮತಿ ಪಿಎಎಸ್ (ಹುಟ್ಟಿದ ದಿನಾಂಕ ನವೆಂಬರ್ 2, 1983), ಶ್ರೀಮತಿ ಆರ್‌‌ಎಎಸ್ (ನವೆಂಬರ್ 22, 1973), ಶ್ರೀಎಪಿಎಸ್ (ನವೆಂಬರ್ 27, 1944),ಶ್ರೀಮತಿ ಎಡಿಎಸ್ (ಹುಟ್ಟಿದ ದಿನಾಂಕ ಆಗಸ್ಟ್ 14, 1949) ಶ್ರೀ ಎಂಎಲ್ ಎ (ಹುಟ್ಟಿದ ದಿನಾಂಕ 20, 1935) ಶ್ರೀ ಎನ್ ಎಂ ಎ (ಹುಟ್ಟಿದ ದಿನಾಂಕ 21, 1968) ಮತ್ತು ಶ್ರೀ ಎಂಎಂಎ (ಹುಟ್ಟಿದ ದಿನಾಂಕ ಜೂನ್ 27, 1973).

ಕಪ್ಪುಹಣಕ್ಕೆ ಅವಕಾಶ ಇಲ್ಲ:ಕಪ್ಪುಹಣ ಹಾಗೂ ಕಾನೂನು ಉಲ್ಲಂಘಿಸಿಗಳಿಸಿದ ಹಣ ಇರಿಸಿಕೊಳ್ಳಲು ಸ್ವಿಸ್ ಬ್ಯಾಂಕ್ ಅವಕಾಶ ನೀಡುವುದಿಲ್ಲ.ಈಗಾಗಲೇ ಕಳೆದ ಹಲವು ವರ್ಷಗಳಿಂದ ಭಾರತ ಸೇರಿದಂತೆ ಹಲವು ದೇಶಗಳು ಕೈಗೊಂಡ ತನಿಖೆಗಳಿಗೆ ಬ್ಯಾಂಕ್ಸಹಕರಿಸುತ್ತಾ ಬಂದಿದೆ. ಹಾಗಂದ ಮಾತ್ರಕ್ಕೆ ಬ್ಯಾಂಕಿನ ಗ್ರಾಹಕರ ವಿವರಗಳನ್ನು ಬ್ಯಾಂಕ್ ಎಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ತಿಳಿಸಿದೆ.

ಮುಂದಿನ ವರ್ಷದಿಂದ ಹೊಸ ನೀತಿ ನಿಯಮಗಳನ್ನು ಜಾರಿಗೆ ತರಲು ಬ್ಯಾಂಕ್ ತೀರ್ಮಾನಿಸಿದೆ. ಈ ಬದಲಾವಣೆಯಲ್ಲಿ ಸ್ವಯಂಚಾಲಿಕ ಮಾಹಿತಿ ವಿನಿಮಯ ಪದ್ಧತಿ ಜಾರಿಗೆ ತರಲಾಗುವುದು. ಸ್ವಿಡ್ಜರ್ ಲ್ಯಾಂಡ್ ಸರ್ಕಾರ ಹಲವು ದೇಶಗಳ ಜೊತೆ ತನ್ನ ಗ್ರಾಹಕರ ಕುರಿತು ಮಾಹಿತಿಗಳನ್ನು ನೀಡಿದೆ. ಭಾರತದ ತನಿಖಾ ಸಂಸ್ಥೆಗಳಿಗೂ ಮಾಹಿತಿ ನೀಡಲು ಮುಂದಾಗಿದ್ದು, ಯಾರು ಹಣದ ಮೂಲವನ್ನು ತಿಳಿಸಿಲ್ಲವೋ ಅಂತಹ ವ್ಯಕ್ತಿಗಳಿಗೆ ನೋಟೀಸ್ ನೀಡಿದೆ. ಈ ಸಂಬಂಧ ಅಲ್ಲಿನ ಸರ್ಕಾರ ರಾಜ್ಯಪತ್ರವನ್ನೂ ಹೊರಡಿಸಿದೆ.

ನೋಟೀಸ್ ನೀಡಿದ 30 ದಿನಗಳ ಒಳಗಾಗಿ ಖಾತೆದಾರರಾಗಲಿ ಅಥವಾ ಅವರ ಸಂಬಂಧಿಕರಾಗಲಿ ಬ್ಯಾಂಕಿಗೆ ಮನವಿ ಸಲ್ಲಿಸಬಹುದು. ಅಲ್ಲದೆ, ಹಣಕಾಸಿನ ಮೂಲದ ದಾಖಲೆಗಳ ಸಹಿತ ಪುರಾವೆ ಒದಗಿಸಬೇಕು. ಆ ಮೂಲಕ ಭಾರತೀಯ ತನಿಖಾ ಸಂಸ್ಥೆಗಳಿಗೆ ಖಾತೆದಾರರು ಸಹಕರಿಸಬೇಕು ಎಂದು ತಿಳಿಸಿದೆ.

ಇದೇ ತಿಂಗಳ 7ರಂದು ಭಾರತೀಯ ರತನ್ ಸಿಂಗ್ ಚೌದರಿ ಎಂಬುವರಿಗೆ ಸ್ವಿಸ್ ಬ್ಯಾಂಕ್ ನೋಟೀಸ್ ಜಾರಿ ಮಾಡಿ 10 ದಿನಗಳ ಕಾಲಾವಕಾಶ ನೀಡಿತ್ತು. ಕಳೆದ ಏಪ್ರಿಲ್ ನಲ್ಲಿ ಶ್ರೀ ಜೆ ಎನ್ ವಿ ಮತ್ತು ಶ್ರೀ ಕುಲದೀಪ್ ಸಿಂಗ್ ಡಿಂಗ್ರಾ ಮತ್ತು ಅನಿಲ್ ಭಾರದ್ವಾಜ್ ಎಂಬುವರಿಗೆ ನೋಟೀಸ್ ನೀಡಿ 30 ದಿನಗಳ ಕಾಲಾವಕಾಶ ನೀಡಲಾಗಿದೆ.

ಭಾರತೀಯ ತನಿಖಾ ಸಂಸ್ಥೆಗಳು ಪನಾಮಾ ಪೇಪರ್ಸ್ ಹಗರಣ ಹಾಗೂ ಹೆಚ್‌ಎಸ್ ಬಿಸಿ ಬ್ಯಾಂಕ್‌‌ನಿಂದ ಸೋರಿಕೆಯಾದ ಮಾಹಿತಿಯನ್ನು ಆಧರಿಸಿ ತನಿಖೆ ಕೈಗೊಂಡಾಗ ಕೆಲ ಭಾರತೀಯರು ಸ್ವಿಸ್ ಬ್ಯಾಂಕ್ ನಲ್ಲಿ ಹಣ ಇರಿಸಿರುವುದು ಕಂಡು ಬಂತು. ಈ ಖಾತೆದಾರರ ಪೂರ್ಣ ಹೆಸರು ಹಾಗೂ ಅವರ ಹಣಕಾಸು ಮೂಲದ ಬಗ್ಗೆ ವಿವರಗಳನ್ನು ನೀಡುವಂತೆ ಭಾರತೀಯ ತನಿಖಾ ಸಂಸ್ಥೆ (ಸಿಬಿಐ ಸೇರಿದಂತೆ ಇತರೆ ತನಿಖಾ ಸಂಸ್ಥೆ)ಗಳು ಸ್ವಿಸ್ ಬ್ಯಾಂಕ್ ಮೇಲೆ ಒತ್ತಡ ಹೇರಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.