ADVERTISEMENT

ಕೇಂದ್ರ ತಿರಸ್ಕೃತ ಸ್ತಬ್ಧಚಿತ್ರ; ತಮಿಳುನಾಡು ಗಣರಾಜ್ಯೋತ್ಸವದಲ್ಲಿ ಅದೇ ಆಕರ್ಷಣೆ!

ಕೇಂದ್ರದ ನಿರ್ಧಾರಕ್ಕೆ ತಿರುಗೇಟು–ರಾಜ್ಯದ ವಿವಿಧೆಡೆಗೆ ಸ್ತಬ್ಧಚಿತ್ರ ರವಾನೆ

ಪಿಟಿಐ
Published 19 ಜನವರಿ 2022, 14:25 IST
Last Updated 19 ಜನವರಿ 2022, 14:25 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಚೆನ್ನೈ: ನವದೆಹಲಿಯ ಗಣರಾಜ್ಯೋತ್ಸವ ಸ್ತಬ್ಧಚಿತ್ರದ ಪಟ್ಟಿಯಿಂದ ತಿರಸ್ಕೃತಗೊಂಡಿರುವ, ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಯನ್ನು ಪರಿಚಯಿಸುವ ಸ್ತಬ್ಧಚಿತ್ರವೇ ಈ ಬಾರಿಯ ರಾಜ್ಯದ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದ್ದು, ಈ ಮೂಲಕ ಕೇಂದ್ರ ಸರ್ಕಾರಕ್ಕೆ ಪರೋಕ್ಷವಾಗಿ ತಿರುಗೇಟು ನೀಡಲು ಡಿಎಂಕೆ ಸರ್ಕಾರ ನಿರ್ಧರಿಸಿದೆ.

ಚೆನ್ನೈಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶನಗೊಳ್ಳಲಿರುವ ಈ ಸ್ತಬ್ಧಚಿತ್ರವನ್ನು ಬಳಿಕ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಿ, ಪ್ರದರ್ಶನ ನೀಡಲು ಸಹ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ದೇಶದ ಸ್ವಾತಂತ್ರ್ಯಕ್ಕೆ ತಮಿಳುನಾಡಿನ ಕೊಡುಗೆ ಕುರಿತು ಈಚೆಗೆ ಹಮ್ಮಿಕೊಂಡಿದ್ದ ಪ್ರದರ್ಶನವೊಂದರ ಫೋಟೊಗಳನ್ನು ದೇಶದ ವಿವಿಧ ನಗರಗಳಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ತಿಳಿಸಿದ್ದಾರೆ.

‘ರಾಜ್ಯದ ಸ್ತಬ್ಧಚಿತ್ರ ತಿರಸ್ಕೃತಗೊಳ್ಳುವುದಕ್ಕೆ ಕೇಂದ್ರವು ಯಾವುದೇ ಕಾರಣವನ್ನೂ ನೀಡಿಲ್ಲ. ಇದೊಂದು ಆಘಾತಕಾರಿ ಸಂಗತಿಯಾಗಿದೆ’ ಎಂದು ಸ್ಟಾಲಿನ್ ಅವರು ಬೇಸರ ವ್ಯಕ್ತಪಡಿಸಿದ್ದರು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರಿಂದ ಪತ್ರ ಬಂದ ಬಳಿಕ ಸ್ಟಾಲಿನ್‌ ಅವರು ಪ್ರಧಾನಿ ಅವರ ಮಧ್ಯಪ್ರವೇಶಕ್ಕೂ ಕೋರಿಕೆ ಸಲ್ಲಿಸಿದ್ದರು. ಆದರೆ ಈ ಪ್ರಯತ್ನವೂ ವಿಫಲವಾದ ಬಳಿಕ ಇದೀಗ ಕೇಂದ್ರದಿಂದ ತಿರಸ್ಕೃತಗೊಂಡ ಸ್ತಬ್ಧಚಿತ್ರವನ್ನು ರಾಜ್ಯದ ಉದ್ದಗಲಕ್ಕೆ ಕೊಂಡೊಯ್ಯುವ ಮೂಲಕ ಕೇಂದ್ರಕ್ಕೆ ತಕ್ಕ ಉತ್ತರ ನೀಡುವ ಕ್ರಮಕ್ಕೆ ಅವರು ಮುಂದಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.