ADVERTISEMENT

ತಮಿಳುನಾಡು | ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ: ಗೇಟ್‌ ಕೀಪರ್ ಬಂಧನ

ಪಿಟಿಐ
Published 8 ಜುಲೈ 2025, 10:31 IST
Last Updated 8 ಜುಲೈ 2025, 10:31 IST
<div class="paragraphs"><p> ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ</p></div>

ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಡಿಕ್ಕಿ

   

ಚಿತ್ರ ಕೃಪೆ: ಎಕ್ಸ್‌

ಕಡಲೂರು (ತಮಿಳುನಾಡು): ರೈಲ್ವೆ ಹಳಿ ದಾಟುತ್ತಿದ್ದ ಶಾಲಾ ವ್ಯಾನ್‌ಗೆ ಪ್ರಯಾಣಿಕ ರೈಲು ಗುದ್ದಿದ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಸಂಖ್ಯೆ ಮೂರಕ್ಕೆ ಏರಿದೆ.

ADVERTISEMENT

ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ಇಂದು (ಮಂಗಳವಾರ) ಬೆಳಿಗ್ಗೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ರೈಲ್ವೆ ಕ್ರಾಸಿಂಗ್‌ ಬಳಿ ನಿಯೋಜನೆಗೊಂಡಿದ್ದ ಗೇಟ್‌ ಕೀಪರ್‌ಅನ್ನು ಪ್ರಶ್ನಿಸಿರುವ ದಕ್ಷಿಣ ರೈಲ್ವೆ, ಆತನನ್ನು ಅಮಾನತುಗೊಳಿಸಿದ್ದು, ದುರಂತಕ್ಕೆ ಕ್ಷಮೆಯಾಚಿಸಿದೆ.

ಮಂಗಳವಾರ ಬೆಳಿಗ್ಗೆ 7.45ರ ಹೊತ್ತಿಗೆ ಕಡಲೂರು ಮತ್ತು ಅಲಪ್ಪಕ್ಕಮ್ ನಡುವಿನ ಗೇಟ್‌ ಸಂಖ್ಯೆ 170ರಲ್ಲಿ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾವಾಹನ ದಾಟುವಾಗ ವಿಲ್ಲುಪುರಂ–ಮೈಲಾಡುತುರೈ(ರೈಲು ಸಂಖ್ಯೆ 56813) ರೈಲು ಗುದ್ದಿದೆ. ಪರಿಣಾಮ ಹಳಿಯಿಂದ ತುಸು ದೂರಕ್ಕೆ ಹೋಗಿ ಶಾಲಾವಾಹನ ಪಲ್ಟಿಯಾಗಿದೆ. 

ರೈಲ್ವೆ ಕ್ರಾಸಿಂಗ್‌ ಬಳಿ ಗೇಟ್ ಹಾಕಲಾಗಿತ್ತು, ಆದರೆ ಶಾಲೆಯನ್ನು ತಲುಪುದು ತಡವಾಗುತ್ತದೆ ಎಂದು ಹೇಳಿ ಶಾಲಾ ವಾಹನದ ಚಾಲಕ ಅಲ್ಲಿದ್ದ ಸಿಬ್ಬಂದಿಯಿಂದ ಗೇಟ್‌ ತೆಗೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸಿಬ್ಬಂದಿ ನಿಯಮವನ್ನು ಉಲ್ಲಂಘಿಸಿ ಗೇಟ್‌ ತೆಗೆದಿದ್ದಾರೆ, ಹೀಗಾಗಿ ಆತನನ್ನು ಅಮಾನತು ಮಾಡಲಾಗಿದೆ. ಆತನ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ ಎಂದು ದಕ್ಷಿಣ ರೈಲ್ವೆ ಹೇಳಿದೆ.

ಘಟನೆ ವೇಳೆ ವಾಹನದಲ್ಲಿ ನಾಲ್ವರು ವಿದ್ಯಾರ್ಥಿಗಳು ಮತ್ತು ಚಾಲಕ ಇದ್ದರು ಎನ್ನಲಾಗಿದೆ. ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಒಬ್ಬ ವಿದ್ಯಾರ್ಥಿ ಹಾಗೂ ಚಾಲಕ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿ ಮಾತನಾಡಿ, ‘ರೈಲ್ವೆ ಗೇಟ್‌ ತೆರೆದಿತ್ತು, ರೈಲು ಬರುವ ಯಾವ ಶಬ್ಧಗಳೂ ಕೇಳಿಸಲಿಲ್ಲ, ಹೀಗಾಗಿ ಚಾಲಕ ಬಸ್‌ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದರು, ಆದರೆ ಏಕಾಏಕಿ ರೈಲು ಬಂದು ಗುದ್ದಿದೆ’ ಎಂದು ಹೇಳಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಚಾಲಕ ಕೂಡ ರೈಲ್ವೆ ಗೇಟ್ ತೆರೆದಿತ್ತು ಎಂದೇ ಹೇಳಿದ್ದಾರೆ.

ಪರಿಹಾರ ಘೋಷಣೆ

ವಿದ್ಯಾರ್ಥಿಗಳ ಸಾವಿಗೆ ವಿಷಾದ ವ್ಯಕ್ತಪಡಿಸಿರುವ ರೈಲ್ವೆ ಇಲಾಖೆ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದೆ. ಗಂಭೀರ ಗಾಯಗೊಂಡವರಿಗೆ ₹2.5 ಲಕ್ಷ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಕೂಡ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಂಭೀರ ಗಾಯಾಳುಗಳಿಗೆ  ₹1 ಲಕ್ಷ ಹಾಗೂ ಸಣ್ಣ ಪುಟ್ಟ ಗಾಯಗಳಾದವರಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಅವಘಡ: ವಿಭಿನ್ನ ವ್ಯಾಖ್ಯಾನಗಳು

ಶಾಲಾ ವಾಹನ ಮತ್ತು ರೈಲು ನಡುವೆ ಸಂಭವಿಸಿದ ಅಪಘಾತ ಕುರಿತಂತೆ ವಿಭಿನ್ನ ವ್ಯಾಖ್ಯಾನಗಳು ಕೇಳಿಬರುತ್ತಿವೆ. ‘ಬೆಳಿಗ್ಗೆ 7.45ರ ವೇಳೆಗೆ ಕಡಲೂರು ಮತ್ತು ಅಲಪ್ಪಕ್ಕಮ್ ನಡುವೆ ಇರುವ ರೈಲ್ವೆ ಲೆವೆಲ್‌ ಕ್ರಾಸಿಂಗ್ ಗೇಟ್‌ ನಂ.170 ಅನ್ನು ದಾಟಲು ಶಾಲಾ ವಾಹನದ ಚಾಲಕ ಪ್ರಯತ್ನಿಸಿದ್ದಾನೆ. ಈ ವೇಳೆ ವಿಲ್ಲುಪುರಂ–ಮೈಲಾದುತುರೈ ಪ್ಯಾಸೆಂಜರ್‌ ರೈಲು (ಸಂಖ್ಯೆ 56813) ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ’ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ಹೇಳಿದೆ. ‘ಅಪಘಾತದ ಸಂಭವಿಸಿದ ಸಂದರ್ಭದಲ್ಲಿ ರೈಲ್ವೆ ಕ್ರಾಸಿಂಗ್‌ ಗೇಟ್‌ ಮುಚ್ಚಿದ ಸ್ಥಿತಿಯಲ್ಲಿ ಇತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದೂ ಹೇಳಿದೆ. ‘ರೈಲ್ವೆ ಕ್ರಾಸಿಂಗ್‌ನ ಗೇಟ್‌ ತೆರೆದ ಸ್ಥಿತಿಯಲ್ಲಿಯೇ ಇತ್ತು’ ಎಂದು ಶಾಲಾ ವಾಹನ ‌ಚಾಲಕ ಶಂಕರ್ ಹಾಗೂ ಗಾಯಗೊಂಡಿ‌ರುವ 12ನೇ ತರಗತಿ ವಿದ್ಯಾರ್ಥಿ ವಿಶ್ವೇಶ ಹೇಳಿದ್ದಾರೆ. ‘ಶಾಲೆ ತಲುಪುವುದು ತಡವಾಗುವುದನ್ನು ತಪ್ಪಿಸುವ ಸಲುವಾಗಿ ರೈಲ್ವೆ ಕ್ರಾಸಿಂಗ್ ಗೇಟ್‌ ಅನ್ನು ತೆರೆದು ಹೋಗಲು ಅನುವು ಮಾಡಿಕೊಡುವಂತೆ ಶಾಲಾ ವಾಹನ ಚಾಲಕ ಒತ್ತಾಯಿಸಿದ’ ಎಂದು ದಕ್ಷಿಣ ರೈಲ್ವೆ ಹೇಳಿದೆ. ‘ಗೇಟ್‌ ಕೀಪರ್‌ ತಪ್ಪಾಗಿ ಗೇಟ್‌ ತೆರೆದು ವಾಹನ ಚಲಿಸಲು ಅನುಮತಿ ನೀಡಿದ್ದಾನೆ. ಇದು ನಿಯಮಗಳು ಹಾಗೂ ಶಿಷ್ಟಾಚಾರದ ಉಲ್ಲಂಘನೆ’ ಎಂದಿದೆ.  ‘ಗೇಟ್‌ ಕೀಪರ್‌ನನ್ನು ಅಮಾ‌ನತುಗೊಳಿಸಲಾಗಿದ್ದು ಆತನನ್ನು ಸೇವೆಯಿಂದ ವಜಾಗೊಳಿಸುವ ಕುರಿತ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕ್ರಿಮಿನಲ್‌ ನಿರ್ಲಕ್ಷ್ಯಕ್ಕಾಗಿ ಎಫ್‌ಐಆರ್‌ ದಾಖಲಿಸಿ ಆತನನ್ನು ಬಂಧಿಸಲಾಗಿದೆ’ ಎಂದೂ ದಕ್ಷಿಣ ರೈಲ್ವೆ ಹೇಳಿದೆ.

ಅಂಡರ್‌ಪಾಸ್‌: ವರ್ಷವಾದರೂ ಸಿಗದ ಅನುಮತಿ!

ರೈಲ್ವೆ ಕ್ರಾಸಿಂಗ್‌ ಗೇಟ್‌ ನಂ. 170ರಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ದಕ್ಷಿಣ ರೈಲ್ವೆ ಮಂಜೂರಾತಿ ನೀಡಿದೆ. ಯೋಜನೆಯ ಪೂರ್ಣ ವೆಚ್ಚವನ್ನು ಕೂಡ ರೈಲ್ವೆ ಭರಿಸಲಿದೆ. ಆದರೆ ಅಂಡರ್‌ಪಾಸ್‌ ನಿರ್ಮಾಣಕ್ಕೆ ಕಳೆದ ಒಂದು ವರ್ಷದಿಂದ ಜಿಲ್ಲಾಧಿಕಾರಿ ಅನುಮತಿ ನೀಡುತ್ತಿಲ್ಲ ಎಂದು ದಕ್ಷಿಣ ರೈಲ್ವೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.