ಕೊಲ್ಕತ್ತಾ: ಸಿಪಿಎಂ ಪಕ್ಷದ ಕೆಂಪುಕೋಟೆಯಾಗಿದ್ದಪಶ್ಚಿಮ ಬಂಗಾಳದಲ್ಲಿ 2011ರಲ್ಲಿಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೇರುವ ಮೂಲಕ ಹೊಸ ಇತಿಹಾಸ ಬರೆಯಿತು.
ಸಿಂಗೂರ್ನಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿದ್ದ ಟಾಟಾ ಕಂಪನಿಯ ನ್ಯಾನೊ ಕಾರು ನಿರ್ಮಾಣ ಯೋಜನೆ ಪರವಾಗಿ ಎಡಪಕ್ಷಗಳು ನಿಂತಾಗ ಅಲ್ಲಿ ಭುಗಿಲೆದ್ದ ರೈತರ ಹೋರಾಟಗಳು ಸಿಪಿಎಂಗೆ ಹೊಡೆತ ನೀಡಿತ್ತು.
ಹೀಗಿರುವಾಗ ಟಾಟಾ ಯೋಜನೆಯನ್ನು ಸಿಂಗೂರ್ನಿಂದ ಹೊರದಬ್ಬಿ ಮಮತಾ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು. ಸಿಂಗೂರ್ನಲ್ಲಿ ಟಾಟಾ ಕಂಪನಿ ತಮ್ಮಯೋಜನೆಯನ್ನು ಕೈ ಬಿಟ್ಟು11 ವರ್ಷಗಳು ಕಳೆದಿವೆ. ಆದರೆ ಇದೇ ಟಾಟಾ, ಈ ಬಾರಿ ತೃಣಮೂಲ ಕಾಂಗ್ರೆಸ್ ಪ್ರಚಾರದಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.
ಪಶ್ಚಿಮ ಬಂಗಾಳ ಉದ್ಯಮ ಸ್ನೇಹಿ ಎಂದು ಸಾರುವ ಟಿಎಂಸಿ ಚುನಾವಣಾ ಪ್ರಚಾರವಿಡಿಯೊದಲ್ಲಿ ಟಾಟಾ ಕಂಪನಿ ಬಗ್ಗೆ ಉಲ್ಲೇಖವಿದೆ.
ಏಪ್ರಿಲ್ 29ರಂದು ಪ್ರಕಟವಾಗಿರುವ ಈ ವಿಡಿಯೊದಲ್ಲಿನಾವು ಟಾಟಾ ಸೇರಿದಂತೆ ಬೃಹತ್ ಕಂಪನಿಗಳನ್ನು ಬಂಗಾಳಕ್ಕೆ ಸ್ವಾಗತಿಸುತ್ತಿದ್ದೇವೆ ಎಂದು ತೃಣಮೂಲ ಕಾಂಗ್ರೆಸ್ ವಕ್ತಾರ ಡೆರಿಕ್ ಒ ಬ್ರೇನ್ ಹೇಳಿದ್ದಾರೆ.
ಸಿಂಗೂರ್ ವಿಷಯದಲ್ಲಿ ಮಮತಾ ಹಠ ಹಿಡಿದ ಕಾರಣ ಟಾಟಾ ಆ ಯೋಜನೆಯನ್ನು ಕೈ ಬಿಟ್ಟಿತ್ತು.ಆದರೆ ಈ ವಿಡಿಯೊದಲ್ಲಿ ಹೊಸ ಹೂಡಿಕೆ ಮತ್ತು ಉದ್ಯಮಗಳನ್ನು ಸ್ವಾಗತಿಸುವ ಧೋರಣೆಯನ್ನು ಮಮತಾ ನೇತೃತ್ವದ ಸರ್ಕಾರ ಹೊಂದಿದೆ.
ನಾವು ಇಂದು ನಿಮ್ಮಲ್ಲಿ ಟಾಟಾ ಬಗ್ಗೆ ಹೇಳುತ್ತೇವೆ. ಟಾಟಾ ಹಿಟಾಚಿ ಅವರ ಕಚೇರಿಯನ್ನು ರಾಂಚಿಯಿಂದ ಬಂಗಾಳಕ್ಕೆ ವರ್ಗಾಯಿಸಿದೆ.ನಾವು ಟಾಟಾವನ್ನು ಸ್ವಾಗತಿಸುತ್ತೇವೆ.ಅವರದ್ದು ಬೃಹತ್ ಉದ್ಯಮ, ಅವರು ಉತ್ಖನನ ಮಾಡುವ ಯಂತ್ರ (excavators)ವನ್ನೂ ನಿರ್ಮಾಣ ಮಾಡುತ್ತಾರೆ. ಇದೀಗ ನಮ್ಮಲ್ಲಿ ಟಾಟಾ ಕಂಪನಿಯ ಹಲವಾರು ಕಚೇರಿಗಳಿವೆ.
ಟಾಟಾ ಸ್ಫೋಂಜ್ ಅವರ ಕಚೇರಿಯನ್ನು ಕಿಯೋನ್ಜರ್ನಿಂದ ಕೊಲ್ಕತ್ತಾಗೆ ವರ್ಗಾವಣೆ ಮಾಡಿದೆ. ಇದೆಲ್ಲವೂ ಬಂಗಾಳದಲ್ಲಿ ನಡೆಯುತ್ತಿದೆ. ಆದ್ದರಿಂದಲೇ ಬ್ಯಾನರ್ಜಿ 42 ಸೀಟುಗಳನ್ನು ಗೆಲ್ಲಲಿದ್ದಾರೆ ಎಂದು ಡೆರಿಕ್ ಒ ಬ್ರೇನ್ ಈ ವಿಡಿಯೊದಲ್ಲಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.