ಪಟ್ನಾ: ‘ಮಹಾ ಮೈತ್ರಿಕೂಟ’ಕ್ಕೆ ಸ್ಪಷ್ಟ ಬಹುಮತ ದೊರೆಯದೇ ಹೋದಲ್ಲಿ ಎಲ್ಜೆಪಿ ಬೆಂಬಲ ಕೋರಲು ಹಿಂಜರಿಯುವುದಿಲ್ಲ ಎಂದು ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಗೆ ಆರ್ಜೆಡಿ 144 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎನ್ಡಿಎಯಿಂದ ಹೊರಗುಳಿದಿರುವ ಎಲ್ಜೆಪಿ 143 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜೆಡಿಯು ಅಭ್ಯರ್ಥಿಗಳ ವಿರುದ್ಧವೇ ಇವರು ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ.
ಎಲ್ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹಾಗೂ ತೇಜಸ್ವಿ ಯಾದವ್ ಇಬ್ಬರೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ರಾಜಕೀಯ ವಿರೋಧಿಗಳಾಗಿದ್ದು, ಅವರು ಮತ್ತೆ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎನ್ನುತ್ತಿದ್ದಾರೆ.
‘ಒಂದು ವಿಷಯವಂತೂ ಸ್ಪಷ್ಟ, ನವೆಂಬರ್ 10ರಂದು ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ನಿತೀಶ್ ಮುಖ್ಯಮಂತ್ರಿಯಾಗಿ ಮುಂದುವರಿಯಲಾರರು’ ಎಂದು ಚಿರಾಗ್ ಪಾಸ್ವಾನ್ ಇತ್ತೀಚೆಗೆ ಹೇಳಿದ್ದಾರೆ. ಅಲ್ಲದೆ, ನಿತೀಶ್ ಅವರು ಮುಖ್ಯಮಂತ್ರಿಯಾದರೆ ಎನ್ಡಿಎ ಮೈತ್ರಿಕೂಟದಿಂದ ಸಂಪೂರ್ಣ ಹೊರ ನಡೆಯುವುದಾಗಿಯೂ ಹೇಳಿದ್ದಾರೆ.
ಸೋಮವಾರ ಎಲ್ಜೆಪಿ ಅಧ್ಯಕ್ಷರ ಪರ ಹೇಳಿಕೆ ನೀಡಿದ್ದ ತೇಜಸ್ವಿ, ನಿತೀಶ್ ಕುಮಾರ್ ಅವರು ಚಿರಾಗ್ ಪಾಸ್ವಾನ್ಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.