
ಪಟ್ನಾ: ಆರ್ಜೆಡಿ ಕಾರ್ಯಕಾರಿ ಅಧ್ಯಕ್ಷ ತೇಜಸ್ವಿ ಯಾದವ್ ಅವರು ಗಾಲಿ ಕುರ್ಚಿಯ ಮೇಲೆ ಕುಳಿತು ಬಿಹಾರ ವಿಧಾನಸಭೆಗೆ ಸೋಮವಾರ ಹಾಜರಾದರು.
‘ಕಾಲಿನ ಹೆಬ್ಬೆರಳಿಗೆ ಗಾಯವಾಗಿರುವ ಕಾರಣ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ತಿಳಿಸಿದರು.
ಬಜೆಟ್ ಅಧಿವೇಶನದ ಅಂಗವಾಗಿ ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
‘ಇತ್ತೀಚೆಗೆ ಎಡಗಾಲಿನ ಹೆಬ್ಬೆರಳಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಮಾಡಬೇಕಾಯಿತು’ ಎಂದು ತಿಳಿಸಿದರು.
‘ರಾಜ್ಯಪಾಲರ ಭಾಷಣವನ್ನು ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಸಿದ್ಧಪಡಿಸಿದ್ದಾಗಿದೆ. ಇತರೆ ಹಲವು ರಾಜ್ಯಗಳಿಗಿಂತ ಬಿಹಾರ ರಾಜ್ಯವು ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದ್ದರೂ ಭಾಷಣದಲ್ಲಿ ಸರ್ಕಾರವನ್ನು ಶ್ಲಾಘಿಸಲಾಗಿದೆ’ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರವು ಭಾನುವಾರ ಮಂಡಿಸಿದ ಬಜೆಟ್ ಅನ್ನು ಚುನಾವಣೆಗೆ ಬಳಸಿಕೊಂಡಂತಿದೆ. ಕಳೆದ ವರ್ಷ ಬಿಹಾರದಲ್ಲಿ ಚುನಾವಣೆ ಇತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಧುಬಾನಿ ಸೀರೆ ಧರಿಸಿದ್ದರು. ಈ ವರ್ಷ ತಮಿಳುನಾಡಿನ ಚುನಾವಣೆ ಇದೆ. ಹೀಗಾಗಿ ನಿರ್ಮಲಾ ಸೀತಾರಾಮನ್ ಅವರು ಕಾಂಜೀವರಂ ಸೀರೆ ಧರಿಸಿದ್ದರು’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.