
ಹೈದರಾಬಾದ್: ಸುಮಾರು 4 ಸಾವಿರ ಹೂಡಿಕೆದಾರರಿಗೆ ₹792 ಕೋಟಿ ವಂಚಿಸಿದ ಆರೋಪದ ಮೇಲೆ ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರನ್ನು ತೆಲಂಗಾಣ ಸಿಐಡಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್’ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ನಡೆಯುತ್ತಿದ್ದ ‘ಕ್ಯಾಪಿಟಲ್ ಪ್ರೊಟೆಕ್ಷನ್ ಫೋರ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ಜನರಿಂದ ಅನಧಿಕೃತವಾಗಿ ಠೇವಣಿ ಸಂಗ್ರಹ, ನಂಬಿಕೆ ದ್ರೋಹ ಹಾಗೂ ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಈ ಪ್ರಕರಣವನ್ನು ದಾಖಲಿಸಲಾಗಿದೆ’ ಎಂದು ಸಿಐಡಿಯ ಹೆಚ್ಚುವರಿ ನಿರ್ದೇಶಕಿ ಚಾರು ಸಿನ್ಹಾ ಅವರು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಆರೋಪಿಯು ತಲೆಮರೆಸಿಕೊಂಡಿದ್ದರು. ಲುಕ್ಔಟ್ ಸುತ್ತೋಲೆಯಂತೆ ಇರಾನ್ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಕರಣದ ಮುಖ್ಯ ಆರೋಪಿ ಫಾಲ್ಕನ್ ಇನ್ವಾಯ್ಸ್ ಡಿಸ್ಕೌಂಟಿಂಗ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಮರ್ದೀಪ್ ಕುಮಾರ್ನನ್ನು ಬಂಧಿಸಲಾಯಿತು. ನ್ಯಾಯಾಲಯದ ಆದೇಶ ಪಡೆದುಕೊಂಡು ಹೈದರಾಬಾದ್ಗೆ ಕರೆದೊಯ್ಯಲಾಯಿತು’ ಎಂದು ತಿಳಿಸಿದ್ದಾರೆ.
‘ಪ್ರತಿಷ್ಠಿತ ಎಂಎನ್ಸಿ ಕಂಪನಿಗಳ ಹೆಸರಿನಲ್ಲಿ ನಕಲಿ ಇನ್ವಾಯ್ಸ್ಗಳ ವ್ಯವಹಾರದ ಒಪ್ಪಂದದ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಬಡ್ಡಿ ದರ ನೀಡುವುದಾಗಿ ನಂಬಿಸಿ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ಗಳ ಮೂಲಕ 7056 ಠೇವಣಿದಾರರಿಂದ ಒಟ್ಟು ₹4,215 ಕೋಟಿ ಠೇವಣಿ ಸಂಗ್ರಹಿಸಿದ್ದರು. ಇದರಲ್ಲಿ 4065 ಮಂದಿಗೆ ₹792 ಕೋಟಿ ವಂಚಿಸಿದ್ದರು’ ಎಂದು ಚಾರು ಸಿನ್ಹಾ ಮಾಹಿತಿ ನೀಡಿದ್ದಾರೆ.
ಸಂತ್ರಸ್ತರು ನೀಡಿದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಬಿಎನ್ಎಸ್ನ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ತೆಲಂಗಾಣದ ಸಿಐಡಿಗೆ ವರ್ಗಾಯಿಸಲಾಗಿತ್ತು.
ಇದುವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ನಿರ್ದೇಶಕರು, ಲೆಕ್ಕ ಪರಿಶೋಧಕ ಸೇರಿದಂತೆ 11 ಮಂದಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
12 ನಿವೇಶನಗಳು, ನಾಲ್ಕು ದುಬಾರಿ ಕಾರು, ₹8 ಲಕ್ಷ ನಗದು, 244 ಗ್ರಾಂ ಚಿನ್ನ, ₹8 ಕೋಟಿ ಠೇವಣಿಯನ್ನು ಗುರುತಿಸಲಾಗಿದ್ದು, ಮುಟ್ಟುಗೋಲು ಹಾಕುವ ಪ್ರಕ್ರಿಯೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.