ADVERTISEMENT

ಉಗ್ರರ ದಾಳಿ: ಸಿಆರ್‌ಪಿಎಫ್‌ ಯೋಧ ಹುತಾತ್ಮ; ಕಾರ್ಮಿಕರು ಸೇರಿ ಮೂವರು ಗಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 12:17 IST
Last Updated 4 ಏಪ್ರಿಲ್ 2022, 12:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಕಾಶ್ಮೀರದ ಪುಲ್ವಾಮ ಹಾಗೂ ಶ್ರೀನಗರ ಜಿಲ್ಲೆಗಳಲ್ಲಿ ಸೋಮವಾರ ಉಗ್ರರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಸಿಆರ್‌ಪಿಎಫ್‌ ಯೋಧ ಹುತಾತ್ಮರಾಗಿದ್ದು, ಬಿಹಾರದ ಇಬ್ಬರು ಕಾರ್ಮಿಕರು ಸೇರಿ ಮೂವರು ಗಾಯಗೊಂಡಿದ್ದಾರೆ.

ವಿಶಾಲ್‌ ಮೃತಪಟ್ಟ ಯೋಧ. ‘ಶ್ರೀನಗರದ ಜನನಿಬಿಡ ಪ್ರದೇಶವಾದ ಲಾಲ್ ಚೌಕ್‌ನ ಮೈಸುಮಾ ಪ್ರದೇಶದ ದಾರ್ ಕಟ್ಟಡದ ಬಳಿ ಸೋಮವಾರ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಇಬ್ಬರು ಯೋಧರು ತೀವ್ರ ಗಾಯಗೊಂಡರು. ಅವರಲ್ಲಿ ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟರು. ಗಾಯಗೊಂಡ ಮತ್ತೊಬ್ಬ ಯೋಧ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಪುಲ್ವಾಮ ಜಿಲ್ಲೆಯ ಲಿಜೋರಾ ಪ್ರದೇಶದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಪಟ್ಲಶ್ವರ್ ಕುಮಾರ್ ಹಾಗೂ ಜೋಕೊ ಚೌಧರಿ ಎಂಬ ಬಿಹಾರದ ಇಬ್ಬರು ಕೂಲಿ ಕಾರ್ಮಿಕರು ಗಾಯಗೊಂಡಿದ್ದು, ಇಬ್ಬರ ಬಲಗೈ ಹಾಗೂ ಕಾಲಿಗೆ ಗುಂಡೇಟು ಬಿದ್ದಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

ಪುಲ್ವಾಮಾದ ಲಿಟ್ಟರ್ ಪ್ರದೇಶದಲ್ಲಿ ಭಾನುವಾರ (ಏ.3) ಪಂಜಾಬ್‌ನ ಇಬ್ಬರು ಕಾರ್ಮಿಕರ ಮೇಲೆ ನಡೆದ ದಾಳಿಯ ಕೆಲ ಗಂಟೆಗಳ ಅಂತರದಲ್ಲಿ ಹೊರ ರಾಜ್ಯದ ಮತ್ತಿಬ್ಬರು ಕಾರ್ಮಿಕರ ಮೇಲೆ ಉಗ್ರರ ದಾಳಿ ನಡೆದಿದ್ದು, ಘಟನೆಯಿಂದಾಗಿ ಕಣಿವೆಯಲ್ಲಿನ ಹೊರ ರಾಜ್ಯಗಳ ಜನರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.