ADVERTISEMENT

ಕುಲ್ಗಾಂ ಎನ್‌ಕೌಂಟರ್‌: ಪಾಕ್‌ ಉಗ್ರನ ಹತ್ಯೆ, ಇಬ್ಬರು ಯೋಧರಿಗೆ ಗಾಯ

ಪಿಟಿಐ
Published 13 ಆಗಸ್ಟ್ 2021, 10:03 IST
Last Updated 13 ಆಗಸ್ಟ್ 2021, 10:03 IST
ಭದ್ರತಾ ಪಡೆಯ ಕಾರ್ಯಾಚರಣೆ– ಸಾಂದರ್ಭಿಕ ಚಿತ್ರ
ಭದ್ರತಾ ಪಡೆಯ ಕಾರ್ಯಾಚರಣೆ– ಸಾಂದರ್ಭಿಕ ಚಿತ್ರ   

ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯ ಮೀರ್‌ಬಜಾರ್‌ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುರುವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್‌ ಎ ತೊಯ್ಬಾ(ಎಲ್‌ಇಟಿ) ಭಯೋತ್ಪಾದಕ ಸಂಘಟನೆಗೆ ಸೇರಿದ ಪಾಕಿಸ್ತಾನಿ ಉಗ್ರನೊಬ್ಬ ಹತನಾಗಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.

ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನ ಬಾಕಿ ಇರುವಂತೆ ನಡೆದಿರುವ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಇಬ್ಬರು ಯೋಧರು ಮತ್ತು ಕೆಲವು ನಾಗರಿಕರು ಗಾಯಗೊಂಡಿದ್ದಾರೆ. ಹತನಾದ ಉಗ್ರನನ್ನು ಉಸ್ಮಾನ್ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದವನಾಗಿದ್ದು, ಎಲ್‌ಇಟಿ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ಕಾಶ್ಮೀರ ಪೊಲೀಸ್ ಮುಖ್ಯಸ್ಥ ವಿಜಯ್‌ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಶ್ರೀನಗರ – ಜಮ್ಮು ಹೆದ್ದಾರಿಯಲ್ಲಿ ಗುರುವಾರ ಸಂಜೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರ ಮೇಲೆ ಇಬ್ಬರು ಎಲ್‌ಇಟಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಉಗ್ರರ ಬೆನ್ನುಹತ್ತಿದ ಬಿಎಸ್‌ಎಫ್‌ ಯೋಧರು, ಅವರನ್ನು ಮೀರ್ ಬಜಾರ್‌ ಸಮೀಪದ ಕಟ್ಟಡವೊಂದರಲ್ಲಿ ‌ಕೂಡಿ ಹಾಕಿದರು. ಉಗ್ರರು ಮತ್ತು ಭದ್ರತಾ ಪಡೆಯ ನಡುವೆ ಗುಂಡಿನ ಚಕಮಕಿ ನಡೆಯಿತು.

ADVERTISEMENT

ಘಟನೆಯಲ್ಲಿ ಒಬ್ಬ ಉಗ್ರ ಹತನಾದ. ಮತ್ತೊಬ್ಬ ಪರಾರಿಯಾದ. ಉಗ್ರರನ್ನು ಕೂಡಿ ಹಾಕಿದ್ದ ಕಟ್ಟಡದಿಂದ 12 ಅಂಗಡಿಗಳ ಮಾಲೀಕರು, ಆರು ಮಹಿಳೆಯರು ಮತ್ತು ನಾಲ್ವರು ಕಾರ್ಮಿಕರು ಸೇರಿ 22 ಮಂದಿಯನ್ನು ರಕ್ಷಿಸಿ ಸ್ಥಳಾಂತರಿಸಲಾಯಿತು ಎಂದು ‍ಪೊಲೀಸರು ತಿಳಿಸಿದ್ದಾರೆ.

ಉಸ್ಮಾನ್ ಒಬ್ಬ ಆತಂಕಕಾರಿ ಉಗ್ರಗಾಮಿಯಾಗಿದ್ದ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಭದ್ರತಾ ಪಡೆಗಳು, ನಾಗರಿಕರ ಮೇಲೆ ದಾಳಿ ನಡೆಸಿ, ಆತಂಕದ ವಾತಾವರಣ ಸೃಷ್ಟಿಸಿ, ಜನರನ್ನು ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಳ್ಳದಂತೆ ಮಾಡುವುದು ಈತನ ಉದ್ದೇಶವಾಗಿತ್ತು ಎಂದು ಕುಮಾರ್ ಹೇಳಿದರು. ‘ಹತ್ಯೆಯಾದ ಉಗ್ರನಿಂದ ಒಂದು ಎಕೆ -47 ರೈಫಲ್, ನಾಲ್ಕು ಮ್ಯಾಗಜಿನ್‌ಗಳು, ಕೆಲವು ಗ್ರೆನೇಡ್‌ಗಳು ಮತ್ತು ಸೆಲ್‌ನೊಂದಿಗೆ ಆರ್‌ಪಿಜಿ ಲಾಂಚರ್ ಅನ್ನು ವಶಪಡಿಸಿಕೊಳ್ಳಲಾಯಿತು‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.