ಉಡುಪಿ: ಪೀಠಾಧಿಪತಿಗಳು ಕೇಸರಿ ರುಮಾಲು, ಮುಂಡಾಸು ಧರಿಸುವುದು ರೂಢಿ. ಆದರೆ, ಪೇಜಾವರ ಶ್ರೀಗಳು ಹೆಚ್ಚಾಗಿ ಧರಿಸುತ್ತಿದ್ದದ್ದು ಕೇಸರಿ ಟೋಪಿ. ಈ ಟೋಪಿ ಧರಿಸುವುದರ ಹಿಂದೆ ಧರ್ಮ ಹಾಗೂ ಆರೋಗ್ಯದ ಕಾಳಜಿ ಅಡಗಿದೆ.
ಕೇಸರಿ ಬಣ್ಣ ಧರ್ಮದ ಸಂಕೇತವಾದರೆ, ಟೋಪಿ ಶೀತಬಾಧೆಯಿಂದ ರಕ್ಷಿಸಲು ಶ್ರೀಗಳು ಕಂಡುಕೊಂಡಿರುವ ಉಪಾಯ. 88 ವರ್ಷದ ಪೇಜಾವರ ಶ್ರೀಗಳದ್ದು ಇಳಿವಯಸ್ಸಿನಲ್ಲಿಯೂ ಅವಿರತ ಸಂಚಾರ. ನಿರಂತರ ಪ್ರವಾಸದಲ್ಲಿರುತ್ತಿದ್ದ ಶ್ರೀಗಳಿಗೆ ಬದಲಾದ ವಾತಾವರಣ ಆಗಾಗ ಅನಾರೋಗ್ಯದ ಸಮಸ್ಯೆ ತಂದೊಡ್ಡುತ್ತಿತ್ತು.
ಕಿವಿಗಳಿಗೆ ಗಾಳಿ ಸೋಕಿ ಶೀತ, ಜ್ವರದ ಬಾಧೆ ಕಾಡುತ್ತಿತ್ತು.ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು ಶ್ರೀಗಳು ಟೋಪಿಯನ್ನು ಹೆಚ್ಚಾಗಿ ಧರಿಸುತ್ತಿದ್ದರು. ಸಾಮಾನ್ಯವಾಗಿ ಪ್ರವಾಸ ಮಾಡುವಾಗಲೆಲ್ಲ ಟೋಪಿಧಾರಿಯಾಗಿಯೇ ಅವರು ಕಾಣಿಸಿಕೊಳ್ಳುತ್ತಿದ್ದರು. ಅಪರೂಪಕ್ಕೊಮ್ಮೆ ತಲೆಯ ಮೇಲೆ ಶಾಲು ಹೊದ್ದುಕೊಳ್ಳುತ್ತಿದ್ದರು.
ಎಸಿ, ಫ್ಯಾನ್ ಬಳಸುವುದಿಲ್ಲ: ಪೇಜಾವರ ಶ್ರೀಗಳು ಎಸಿ, ಫ್ಯಾನ್ ಕೂಡ ಬಳಸುವುದಿಲ್ಲ. ಕಾರಿನ ಕಿಟಕಿಗಳು ಸದಾ ಮುಚ್ಚಿರುತ್ತಿದ್ದವು. ಕಾರಿನಲ್ಲಿಯೂ ಟೋಪಿ ಹಾಕಿಕೊಂಡು ಗಾಳಿಯಿಂದ ರಕ್ಷಣೆ ಪಡೆಯುತ್ತಿದ್ದರು. ಕಾರ್ಯಕ್ರಮದ ವೇದಿಕೆಗಳಲ್ಲಿಯೂ ಫ್ಯಾನ್ ಬಳಕೆ ಅಪರೂಪ.
ಪತ್ರಿಕೆ ಓದುವಾಗ, ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುವಾಗಲೂ ಟೋಪಿ ಶ್ರೀಗಳ ಮುಡಿಯಲ್ಲಿ ಇರುತ್ತಿತ್ತು. ಹೀಗೆ, ಬದುಕಿನುದ್ದಕ್ಕೂ ಶ್ರೀಗಳ ಒಡನಾಡಿಯಾಗಿದ್ದ ಕೇಸರಿ ಟೋಪಿ ಒಂಟಿಯಾಗಿದೆ. ಗಾಳಿಯಿಂದ ರಕ್ಷಣೆ ಪಡೆಯಲು ಸದಾ ಹೆಣಗಾಡುತ್ತಿದ್ದ ಶ್ರೀಗಳು ಕೊನೆಗೂ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆ ಸೇರಿದರು. ಮತ್ತೆ ಮರಳಿ ಬರಲೇ ಇಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.