ADVERTISEMENT

ಬಿಹಾರ: ಕೃಷಿ ಕಾಯ್ದೆ ವಿರೋಧಿಸಿ ರೈತರು, ಕಾರ್ಮಿಕರಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 10:22 IST
Last Updated 29 ಡಿಸೆಂಬರ್ 2020, 10:22 IST
ಪ್ರತಿಭಟನೆ ಚಿತ್ರ
ಪ್ರತಿಭಟನೆ ಚಿತ್ರ   

ಪಟ್ನಾ: ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಬಿಹಾರದಲ್ಲಿ ಸಾವಿರಾರು ರೈತರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ನಾನಾ ಸಂಘಟನೆಗಳ ಕಾರ್ಯಕರ್ತರು ರಾಜಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಬೃಹತ್‌ ಪ್ರತಿಭಟನೆಯಲ್ಲಿ ಸಾವಿರಾರು ರೈತರು, ಸಿಪಿಎಂ ಸೇರಿಂದಂತೆ ಎಡ ಪಕ್ಷಗಳ ಮುಖಂಡರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಇಲ್ಲಿನ ಪ್ರಸಿದ್ಧ ಗಾಂಧಿ ಮೈದಾನದಿಂದ ಆರಂಭವಾದ ಪ್ರತಿಭಟನೆ ಮೆರವಣಿಗೆಯು ರಾಜಭವನ ತಲುಪಿತು. ರಾಜಭವನದ ಎದುರು ಪ್ರತಿಭಟನೆನಿರತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೇ ಕಾಯ್ದೆಯನ್ನು ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ಹೊಸ ಕೃಷಿ ಕಾಯ್ದೆಯಲ್ಲಿ ರೈತರ ಆದಾಯವನ್ನು ನಾಶಪಡಿಸಿ, ಕಾರ್ಪೊರೇಟ್‌ ಕಂಪನಿಗೆ ಹೆಚ್ಚಿನ ಲಾಭವಾಗುವಂತಹ ಅಂಶಗಳನ್ನು ಸೇರಿಸಲಾಗಿದೆ. ಅಲ್ಲದೇ ರೈತರ ಮೇಲೆ ಕಾರ್ಪೊರೇಟ್‌ಗಳು ಹಿಡಿತ ಸಾದಿಸುವ ಸಾಧ್ಯತೆಗಳಿರುವುದರಿಂದ ಕಾಯ್ದೆಯನ್ನು ರದ್ದುಪಡಿಸಬೇಕು ಎಂಬುದು ಪ್ರತಿಭಟನೆ ನಿರತ ರೈತರ ಒತ್ತಾಯವಾಗಿದೆ.

ಈ ಕಾಯ್ದೆಯು ರೈತರ ಆದಾಯವನ್ನು ಹೆಚ್ಚಿಸುತ್ತವೆ ಎಂದು ಕೇಂದ್ರ ಸರ್ಕಾರ ಹೇಳಿದೆ, ಏಕೆಂದರೆ ಸಗಟು ದಲ್ಲಾಳಿಗಳನ್ನು ದೂರ ಇಟ್ಟು ನೇರವಾಗಿ ರಿಲಯನ್ಸ್, ವಾಲ್ ಮಾರ್ಟ್ ಮತ್ತು ಅದಾನಿ ಎಂಟರ್ ಪ್ರೈಸಸ್ ನಂತಹ ಸಗಟು ಖರೀದಿದಾರರನ್ನು ನೇರವಾಗಿ ರೈತರೊಂದಿಗೆ ಸಂಪರ್ಕಿಸುವ ಅಂಶಗಳು ಈ ಕಾಯ್ದೆಯಲ್ಲಿವೆ ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.