ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಲಷ್ಕರ್–ಎ–ತಯಬಾಗೆ ಸೇರಿದ್ದ ಮೂವರು ಉಗ್ರರ ಸಹಚರರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತರಿಂದ ಮೂರು ಹ್ಯಾಂಡ್ ಗ್ರನೇಡ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಭದ್ರತಾ ಪಡೆಯನ್ನು ಗುರಿಯಾಗಿಸಿ ಬಾರಾಮುಲ್ಲಾದಲ್ಲಿ ನಿಷೇಧಿತ ಲಷ್ಕರ್–ಎ–ತಯಬಾ (ಎಲ್ಇಟಿ) ಸಂಘಟನೆಯ ಕೆಲವು ಉಗ್ರರ ಚಲನವಲನಗಳು ಇರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಶೋಧ ಕಾರ್ಯ ನಡೆಸಲಾಗಿತ್ತು. ಈ ವೇಳೆ ಮೂವರು ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಓವೈಸ್ ಅಹಮದ್ ವಾಜಾ, ಬಸಿತ್ ಫಯಾಜ್ ಕಾಲೋ ಮತ್ತು ಫಹೀಮ್ ಅಹಮದ್ ಮಿರ್ ಎನ್ನುವವರು ಬಂಧಿತರು. ಇವರು ಭದ್ರತಾ ಪಡೆ ಅಧಿಕಾರಿಗಳ ಚಟುವಟಿಕೆಯ ಬಗ್ಗೆ ತಮ್ಮ ತಂಡಕ್ಕೆ ಮಾಹಿತಿ ರವಾನಿಸುತ್ತಿದ್ದರು. ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಬಾರಾಮುಲ್ಲಾದಲ್ಲಿ ಅಹಿತಕರ ಘಟನೆ ನಡೆಸಲು ಸಂಚು ರೂಪಿಸಿದ್ದರು ಎಂದು ಶಂಕಿಸಲಾಗಿದೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.