ನವದೆಹಲಿ : ‘ಪ್ರತಿಭಟನೆನಿರತ ರೈತರು ಪ್ರಧಾನಿಯ ಘನತೆಯನ್ನು ಗೌರವಿಸುತ್ತಾರೆ. ಅದರೆ ತಮ್ಮ ಆತ್ಮಗೌರವವನ್ನು ರಕ್ಷಿಸಿಕೊಳ್ಳಲೂ ಬದ್ಧರಾಗಿದ್ದಾರೆ’ ಎಂದು ಭಾರತೀಯ ಕಿಸಾನ್ ಯೂನಿಯನ್ನ ನಾಯಕರಾದ ನರೇಶ್ ಟಿಕಾಯತ್ ಮತ್ತು ರಾಕೇಶ್ ಟಿಕಾಯತ್ ಹೇಳಿದ್ದಾರೆ.
‘ರೈತರು ನಮ್ಮ ಸರ್ಕಾರದಿಂದ ಒಂದು ಕರೆಯಷ್ಟು ದೂರದಲ್ಲಷ್ಟೇ ಇದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದರು.ಇನ್ನೂ ಒಂದೂವರೆ ವರ್ಷ ಈ ಕಾಯ್ದೆಗಳನ್ನು ಜಾರಿಗೆ ತರುವುದಿಲ್ಲ ಎಂಬ ನಮ್ಮ ಮಾತಿಗೆ ಇನ್ನೂ ಬದ್ಧವಾಗಿದ್ದೇವೆ ಎಂದೂ ಪ್ರಧಾನಿ ಹೇಳಿದ್ದರು. ಇದಕ್ಕೆ ಪ್ರತಿಯಾಗಿ ಟಿಕಾಯತ್ ಸೋದರರು ಈ ಹೇಳಿಕೆ ನೀಡಿದ್ದಾರೆ.
‘ನಾವು ಇನ್ನೂ ಮಾತುಕತೆಗೆ ಸಿದ್ಧರಿದ್ದೇವೆ. ಸರ್ಕಾರ ಮತ್ತು ರೈತರ ಆಗ್ರಹಗಳನ್ನು ಚರ್ಚಿಸಲು ಸಿದ್ಧರಿದ್ದೇವೆ. ಆದರೆ ರೈತರು ತಮ್ಮ ಆತ್ಮಗೌರವವನ್ನು ರಕ್ಷಿಸಿಕೊಳ್ಳಲು ಬದ್ಧರಾಗಿದ್ದಾರೆ’ ಎಂದು ಟಿಕಾಯತ್ ಸೋದರರು ಹೇಳಿದ್ದಾರೆ.
‘ಈ ಬಿಕ್ಕಟ್ಟಿಗೆ ಗೌರವಯುತವಾದ ಪರಿಹಾರವನ್ನು ಕಂಡುಕೊಳ್ಳಲು ನಾವು ಸಿದ್ಧರಿದ್ದೇವೆ. ಆದರೆ ಯಾವುದೇ ಒತ್ತಡಕ್ಕೆ ಮಣಿದು ಏನನ್ನೂ ಒಪ್ಪಿಕೊಳ್ಳುವುದಿಲ್ಲ. ಆದರೆ ಸಂಸತ್ತೂ ನಮ್ಮ ಮುಂದೆ ತಲೆಬಾಗುವುದು ಬೇಡ’ ಎಂದು ಟಿಕಾಯತ್ ಸೋದರರು ಹೇಳಿದ್ದಾರೆ.
ಗಣರಾಜ್ಯೋತ್ಸವದ ದಿನ ನಡೆದ ಹಿಂಸಾಚಾರವನ್ನು ಖಂಡಿಸುತ್ತೇವೆ. ಆದರೆ ಆ ಹಿಂಸಾಚಾರವು ರೈತರ ವಿರುದ್ಧ ನಡೆಸಲಾದ ಸಂಚು ಎಂದು ಅವರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.