ADVERTISEMENT

ಬಿಜೆಪಿ ವಿರುದ್ಧದ ಮತಗಳನ್ನು ಒಡೆಯಲು ಟಿಎಂಸಿ ಯತ್ನ: ಅಧಿರ್ ರಂಜನ್ ಚೌಧರಿ ಟೀಕೆ

ಪಿಟಿಐ
Published 21 ಜನವರಿ 2022, 2:23 IST
Last Updated 21 ಜನವರಿ 2022, 2:23 IST
ಅಧಿರ್ ರಂಜನ್ ಚೌಧರಿ (ಪಿಟಿಐ ಚಿತ್ರ)
ಅಧಿರ್ ರಂಜನ್ ಚೌಧರಿ (ಪಿಟಿಐ ಚಿತ್ರ)   

ಕೋಲ್ಕತ್ತ: ಬಿಜೆಪಿ ವಿರುದ್ಧದ ಮತಗಳನ್ನು ಒಡೆಯಲು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌಧರಿ ಟೀಕಿಸಿದ್ದಾರೆ.

ಕೇಸರಿ ಪಕ್ಷದ ವಿರುದ್ಧ ಒಗ್ಗಟ್ಟು ಮೂಡಿಸುತ್ತಿರುವುದಾಗಿ ಟಿಎಂಸಿ ಹೇಳುತ್ತಿರುವುದು ಕೇವಲ ನಾಟಕ. ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ ಅನ್ನು ಮುಗಿಸಲು ಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ಗೋವಾ ಚುನಾವಣೆಗೆ ಟಿಎಂಸಿಯು ಇತ್ತೀಚೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ಗೋವಾ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ‘ಮಹಾರಾಷ್ಟ್ರವಾದಿ ಗೋಮಂತಕ್ ಪಕ್ಷದ (ಎಂಜಿಪಿ) ಜತೆ ಮೈತ್ರಿ ಮಾಡಿಕೊಂಡಿದೆ.

ADVERTISEMENT

‘ಬಿಜೆಪಿಯೇತರ ಮತಗಳನ್ನು ವಿಭಜಿಸುವುದು ಟಿಎಂಸಿಯ ಮುಖ್ಯ ಪಾತ್ರವಾಗಿದೆ. ಟಿಎಂಸಿಯು ಹಣಬಲ ಉಪಯೋಗಿಸಿಕೊಂಡು ಕೆಲವು ನಾಯಕರನ್ನು ಕರೆತಂದಿದೆ. ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡು ಕಾಂಗ್ರೆಸ್‌ಗೆ ತೊಂದರೆ ಉಂಟುಮಾಡಲು ಯತ್ನಿಸುತ್ತಿದೆ. ಇದು ಸಾಬೀತಾಗಿರುವ ಸತ್ಯ’ ಎಂದು ಚೌಧರಿ ಹೇಳಿದ್ದಾರೆ.

‘ಬಿಜೆಪಿಯ ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ ಇರುವ ರಾಜ್ಯಗಳಲ್ಲೇ ಟಿಎಂಸಿ ಈ ರೀತಿ ಮಾಡುತ್ತಿದೆ. ಇತರ ಪ್ರಾದೇಶಿಕ ಶಕ್ತಿಗಳು ಇರುವುದರಿಂದ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಸ್ಪರ್ಧಿಸುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.