ಚೆನ್ನೈ : ಮೆಟ್ಟೂರು ಜಲಾಶಯದಿಂದ ಇದೇ ಜುಲೈ 19ರಿಂದ ನೀರು ಹರಿಸಲು ತಮಿಳುನಾಡು ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಇದರಿಂದ ಕಾವೇರಿ ಕಣಿವೆ ಪ್ರದೇಶದ ರೈತರಿಗೂ ದೊಡ್ಡ ಪರಿಹಾರ ಸಿಕ್ಕಂತಾಗಿದೆ.
ಜಲಾಶಯದ ನೀರಿನ ಸಂಗ್ರಹ ಗರಿಷ್ಠ ಮಟ್ಟ 120 ಅಡಿಯಾಗಿದ್ದು, ನೀರಿನ ಸಂಗ್ರಹ 90 ಅಡಿಗೆ ಬಹುತೇಕ ತಲುಪಲಿದೆ. ಸೋಮವಾರ ಜಲಾಶಯದ ನೀರಿನ ಮಟ್ಟ 89.18 ಅಡಿ ಇದ್ದು, 99,372 ಕ್ಯೂಸೆಕ್ ಒಳ ಹರಿವು ಇತ್ತು.
ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ಮತ್ತು ಹಿರಿಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ನಿರ್ಧಾರ ಪ್ರಕಟಿಸಿದರು.
ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಮಳೆ ತೀವ್ರಗೊಳ್ಳಲಿರುವುದಾಗಿ ಭಾರತೀಯ ಹಮಾವಾನ ಇಲಾಖೆ ನೀಡಿರುವ ವರದಿ, ಮುಂಬರುವ ತಿಂಗಳುಗಳಲ್ಲಿ ಕರ್ನಾಟಕವು ಜಲಾಶಯಗಳಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಹೊರ ಬಿಡಲಿದೆ ಎನ್ನುವ ಮಾಹಿತಿ ಹಾಗೂ ಸದ್ಯ ಜಲಾಶಯದ ನೀರಿನ ಮಟ್ಟ ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಜಲಾಶಯದಿಂದ ನೀರು ಹರಿಸುವುದರಿಂದ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಪುನಶ್ಚೇತನವಾಗಲಿದೆ. ಅಲ್ಲದೆ, ಕಾವೇರಿ ತೀರದ 700 ಕೆರೆಗಳೂ ನೀರು ಕಾಣಲಿವೆ ಎಂದು ಅವರು ತಿಳಿಸಿದ್ದಾರೆ.
**
ಭತ್ತದ ಕೃಷಿಗಾಗಿ ಅನುಕೂಲವಾಗುಂತೆ ಜುಲೈ 19ರಿಂದ ಮೆಟ್ಟೂರು ಜಲಾಶಯದಿಂದ ನೀರು ಬಿಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಈ ಬಗ್ಗೆ ಸಾಕಷ್ಟು ರೈತರಿಂದ ಬೇಡಿಕೆಯೂ ಬಂದಿತ್ತು.
-ಕೆ.ಪಳನಿಸ್ವಾಮಿ, ತಮಿಳುನಾಡು ಮುಖ್ಯಮಂತ್ರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.