ಚೆನ್ನೈ: ‘ತಮಿಳುನಾಡು ಸರ್ಕಾರವು ಒಂದು ವರ್ಷದೊಳಗೆ ರೈತರಿಗೆ ಒಂದು ಲಕ್ಷ ಉಚಿತ ವಿದ್ಯುತ್ ಸಂಪರ್ಕಗಳನ್ನು ಒದಗಿಸುವ ಮೂಲಕ ದಾಖಲೆ ನಿರ್ಮಿಸಿದೆ. ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ರಾಜ್ಯವು ಉತ್ತಮ ಸಾಧನೆ ಮಾಡಲಿದೆ’ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶನಿವಾರ ಹೇಳಿದ್ದಾರೆ.
‘ಇದು ಅಲ್ಪಾವಧಿಯಲ್ಲಿಯೇ ಮಾಡಿರುವ ಬಹಳ ದೊಡ್ಡ ಸಾಧನೆ’ ಎಂದು ಬಣ್ಣಿಸಿರುವ ಅವರು, ‘ಈ ವಿಶಿಷ್ಟ ಸಾಧನೆಯು ಎಐಎಡಿಎಂಕೆಯ 10 ವರ್ಷದ ಆಡಳಿತದಲ್ಲಿ ಮಾಡದ ಸಾಧನೆಯನ್ನು ಮಾಡಿದಂತಾಗಿದೆ’ ಎಂದು ತಿಳಿಸಿದ್ದಾರೆ.
‘ವಿದ್ಯುತ್ ಖಾತೆ ಸಚಿವ ವಿ.ಸೆಂಥಿಲ್ ಬಾಲಾಜಿ, ರಾಜ್ಯದ ವಿದ್ಯುತ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ರೈತರ ಪ್ರಯತ್ನದಿಂದ ಇದು ಸಾಧ್ಯವಾಗಿದೆ’ ಎಂದು ಸ್ಟಾಲಿನ್ ಅವರು ವಿಡಿಯೊ ಕಾನ್ಫರೆನ್ಸ್ ಸಂವಾದದಲ್ಲಿ ಹೇಳಿದ್ದಾರೆ.
‘ಒಂದು ವರ್ಷದ ಅವಧಿಯಲ್ಲಿ ರೈತರಿಗೆ ಒಂದು ಲಕ್ಷ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವೇ ಎಂಬ ಅನುಮಾನ ಹಲವರಲ್ಲಿ ಮೂಡಿತ್ತು. ನನಗೂ ಈ ಬಗ್ಗೆ ಸಂಶಯ ಮೂಡಿತ್ತು. ಆದರೆ, ಸಚಿವ ಸೆಂಥಿಲ್ ಬಾಲಾಜಿ ಅವರು ಗುರಿ ಸಾಧಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ 23 ರಂದು ಈ ಯೋಜನೆ ಘೋಷಿಸಲಾಗಿತ್ತು. ಆ ಸಂದರ್ಭದಲ್ಲಿ 10 ಮಂದಿ ರೈತರಿಗೆ ಮಂಜೂರಾತಿ ಆದೇಶಗಳನ್ನು ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.