ಚೆನ್ನೈ: ತಮಿಳುನಾಡು ವಿಶ್ವವಿದ್ಯಾಲಯವೊಂದರ ಇಂಗ್ಲೀಷ್ ಸ್ನಾತಕೋತ್ತರ ಪದವಿ ಪಠ್ಯಕ್ರಮದ ಭಾಗವಾಗಿದ್ದ ಅರುಂಧತಿ ರಾಯ್ ಅವರ ‘ವಾಕಿಂಗ್ ವಿದ್ ದಿ ಕಾಮ್ರೆಡ್ಸ್’ ಕೃತಿಯನ್ನು, ಪಠ್ಯಕ್ರಮದಿಂದ ತೆಗೆಯಲಾಗಿದೆ.
ಈ ಕೃತಿಯನ್ನು ಪಠ್ಯಕ್ರಮದ ಭಾಗ ಮಾಡಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್(ಎಬಿವಿಪಿ) ಸೇರಿದಂತೆ ಹಲವರು ಖಂಡಿಸಿದ್ದರು. ಈ ಕೃತಿಯು ಉಗ್ರವಾದವನ್ನು ವೈಭವೀಕರಿಸುತ್ತಿದೆ ಹಾಗೂ ದೇಶದ್ರೋಹಿ ವಿಷಯಗಳನ್ನು ಒಳಗೊಂಡಿದೆ ಎಂದು ಎಬಿವಿಪಿ ಆರೋಪಿಸಿತ್ತು. ತಿರುನಲ್ವೇಲಿ ಮೂಲದ ಮನೋನ್ಮನಿಯಂ ಸುಂದರನರ್ ವಿಶ್ವವಿದ್ಯಾಲಯದಡಿ ಬರುವ ಕಾಲೇಜುಗಳ ಎಂ.ಎ ಇಂಗ್ಲೀಷ್ ಮೂರನೇ ಸೆಮಿಸ್ಟರ್ನ ಪಠ್ಯಕ್ರಮದಲ್ಲಿ 2017–18ರಿಂದ ಈ ಕೃತಿಯು ಭಾಗವಾಗಿತ್ತು. ವಿಶ್ವವಿದ್ಯಾಲಯದ ಈ ಕ್ರಮವನ್ನು ವಿರೋಧ ಪಕ್ಷಗಳಾದ ಡಿಎಂಕೆ ಹಾಗೂ ಸಿಪಿಐಎಂ ಖಂಡಿಸಿವೆ.
‘ಎಬಿವಿಪಿಯು ಕಳೆದ ವಾರ ನಮಗೆ ಲಿಖಿತ ದೂರನ್ನು ನೀಡಿತ್ತು. ಜೊತೆಗೆ ಸಿಂಡಿಕೇಟ್ ಸದಸ್ಯರೂ ಈ ಕುರಿತು ದೂರು ಸಲ್ಲಿಸಿದ್ದರು. ಪುಸ್ತಕದಲ್ಲಿ ವಿವಾದಾತ್ಮಕ ವಿಷಯಗಳಿದ್ದು, ಪಠ್ಯಕ್ರಮದಿಂದ ಇದನ್ನು ತೆಗೆಯಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ತಜ್ಞರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿತ್ತು. 207–18ರಲ್ಲಿ ಪಠ್ಯಕ್ರಮವನ್ನು ರಚಿಸಿದ ಸಮಿತಿಯ ಅಧ್ಯಕ್ಷರೂ ಇದರ ಭಾಗವಾಗಿದ್ದರು. ಬುಧವಾರ ನಡೆದ ಸಭೆಯಲ್ಲಿ ಈ ಕೃತಿಯನ್ನು ಪಠ್ಯಕ್ರಮದಿಂದ ತೆಗೆಯಲು ನಿರ್ಧರಿಸಲಾಗಿದ್ದು, ಇದರ ಬದಲಾಗಿ ಪದ್ಮ ಪ್ರಶಸ್ತಿ ಪುರಸ್ಕೃತ ಎಂ.ಕೃಷ್ಣನ್ ಅವರ ‘ಮೈ ನೇಟಿವ್ ಲ್ಯಾಂಡ್, ಎಸ್ಸೇಸ್ ಆನ್ ನೇಚರ್’ ಕೃತಿಯನ್ನು ಸೇರಿಸಲಾಗಿದೆ’ ಎಂದು ಎಂಎಸ್ಯು ಕುಲಪತಿ ಕೆ.ಪಿಚುಮಣಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.