ADVERTISEMENT

2026 ಜನವರಿ 13: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2026, 14:37 IST
Last Updated 13 ಜನವರಿ 2026, 14:37 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

‘10 ನಿಮಿಷಗಳ ಡೆಲಿವರಿ’ ರದ್ದುಗೊಳಿಸಿ: ಕ್ವಿಕ್‌ ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಸೂಚನೆ

ಗಿಗ್ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ‘10 ನಿಮಿಷಗಳ ವಿತರಣೆ ಸೇವೆ’(ಟೆನ್‌ ಮಿನಿಟ್ಸ್‌ ಡೆಲಿವರಿ) ಅನ್ನು ರದ್ದುಗೊಳಿಸಬೇಕು ಎಂದು ಕ್ವಿಕ್‌ ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ಸೂಚಿಸಿದ್ದಾರೆ. ಕ್ವಿಕ್‌ ಕಾಮರ್ಸ್‌ ಕಂಪನಿಗಳಾದ ಬ್ಲಿಂಕ್‌ ಇಟ್‌, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಜತೆ ಸಭೆ ನಡೆಸಿರುವ ಸಚಿವರು, ಇಷ್ಟೇ ನಿಮಿಷದಲ್ಲಿ ಡೆಲಿವರಿ ಮಾಡಬೇಕೆಂಬ ಗಡುವು ನೀಡುವುದನ್ನು ನಿಲ್ಲಿಸಿ ಎಂದಿದ್ದಾರೆ.

ಬೀದಿ ನಾಯಿ ಕಡಿತದಿಂದ ಗಾಯ–ಸಾವು ಸಂಭವಿಸಿದರೆ, ಸರ್ಕಾರ ಭಾರಿ ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್

ಬೀದಿ ನಾಯಿಗಳ ಹಾವಳಿ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರವೂ ವಿಚಾರಣೆ ಮುಂದುವರಿದಿದೆ. ನಾಯಿಗಳ ಕಡಿತದಿಂದ ಜನರಿಗೆ ಗಾಯ ಅಥವಾ ಸಾವು ಸಂಭವಿಸಿದರೆ, ರಾಜ್ಯ ಸರ್ಕಾರ ಭಾರಿ ಪರಿಹಾರವನ್ನು ನೀಡಬೇಕಾಗುತ್ತದೆ ಎಂದು ನ್ಯಾಯಾಧೀಶರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಇರಾನ್‌ನಲ್ಲಿ ಪ್ರತಿಭಟನೆ: 2,000 ಮಂದಿ ಸಾವು 

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಈವರೆಗೆ ಸುಮಾರು 2,000 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯ ಸಾವಿಗೆ ಭಯೋತ್ಪಾದಕರು ಕಾರಣ ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ.ಇದು ಭಯೋತ್ಪಾದಕರ ವಿರುದ್ಧದ ಯುದ್ಧ ಎಂದು ಇರಾನ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಲಕ್ಕುಂಡಿಯ ಚಿನ್ನದ ನಿಧಿ ಪ್ರಕರಣ: ಪುರಾತತ್ವ ಅಧಿಕಾರಿಯ ದ್ವಂದ್ವ ಹೇಳಿಕೆ!

ಗದಗ ತಾಲ್ಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಮನೆ ಅಡಿಪಾಯ ತೆಗೆಯುವ ವೇಳೆ ಸಿಕ್ಕ 466 ಗ್ರಾಂ ತೂಕದ ಚಿನ್ನಾಭರಣ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ಮೊದಲು ‘ಇವು ನಿಧಿ ಅಲ್ಲ, ಮನೆಯವರು ಮರೆಮಾಚಿ ಇಟ್ಟ ಆಭರಣಗಳು’ ಎಂದು ಹೇಳಿದ್ದ ಪುರಾತತ್ವ ಇಲಾಖೆಯ ಅಧಿಕಾರಿ, ಎರಡು ದಿನಗಳ ಬಳಿಕ ಹೇಳಿಕೆ ಬದಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ-ಶಿವಕುಮಾರ್ ಜೊತೆ ರಾಹುಲ್ ಗಾಂಧಿ ಪ್ರತ್ಯೇಕ ಮಾತುಕತೆ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮಿಳುನಾಡು ಪ್ರವಾಸ ಮುಗಿಸಿ ದೆಹಲಿಗೆ ವಾಪಸ್ ಆಗುವ ಮಾರ್ಗ ಮಧ್ಯೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಂದೆರಡು ನಿಮಿಷ ಪ್ರತ್ಯೇಕ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಆರ್‌ಎಸ್ಎಸ್‌ ಕಾರ್ಯದರ್ಶಿ ದತ್ತಾತ್ರೇಯ ಭೇಟಿಯಾದ ಚೀನಾದ ಕಮ್ಯುನಿಸ್ಟ್ ನಿಯೋಗ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರನ್ನು ಚೀನಾ ಕಮ್ಯುನಿಸ್ಟ್ ಪಕ್ಷದ ನಿಯೋಗವೊಂದು ದೆಹಲಿಯಲ್ಲಿ ಮಂಗಳವಾರ ಭೇಟಿ ಮಾಡಿದೆ. ಹೊಸಬಾಳೆ ಅವರೊಂದಿಗೆ ನಿಯೋಗ ಒಂದು ಗಂಟೆ ಕಾಲ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ. ಚೀನಾದ ಮನವಿ ಮೇರೆಗೆ ಈ ಸಭೆಯನ್ನು ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಶೀಘ್ರವೇ ಮೆಟ್ರೊ ಪ್ರಯಾಣ ದರ ಮತ್ತೆ ಏರಿಕೆ

ನಮ್ಮ ಮೆಟ್ರೊ ಪ್ರಯಾಣಿಕರಿಗೆ ಶೀಘ್ರವೇ ಮತ್ತೊಮ್ಮೆ ದರ ಏರಿಕೆ ಬಿಸಿ ತಟ್ಟಲಿದೆ. ಫೆಬ್ರುವರಿಯಿಂದ ಶೇಕಡ 5ರಷ್ಟು ಟಿಕೆಟ್‌ ದರ ಏರಿಕೆ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಮುಂದಾಗಿದೆ ಎಂದು ವರದಿಯಾಗಿದೆ. ಫೆಬ್ರುವರಿಯಲ್ಲಿ ಮೆಟ್ರೊ ಪ್ರಯಾಣ ದರವನ್ನು ಶೇಕಡ 5ರಷ್ಟು ಹೆಚ್ಚಿಸಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

ದಾಳಿಯ ಎಚ್ಚರಿಕೆ ನೀಡಿದ ಅಮೆರಿಕ ವಿರುದ್ಧ ತಿರುಗಿಬಿದ್ದ ಇರಾನ್

ಗಲಭೆ ಪೀಡಿತ ಇರಾನ್ ಮೇಲೆ ದಾಳಿ ನಡೆಸಿ, ನಾಗರಿಕರ ರಕ್ಷಣೆಗೆ ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲ ಖಮೇನಿ, ಈ ವಂಚನೆಯ ಕ್ರಮ ಮತ್ತು ದೇಶದ್ರೋಹಿ ಪ್ರತಿಭಟನಾಕಾರರಿಗೆ ನೀಡುತ್ತಿರುವ ಬೆಂಬಲ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದಾರೆ.

1 ಲಕ್ಷ ಅಮೆರಿಕ ವೀಸಾ ರದ್ದು; ಭಾರತೀಯ ವಿದ್ಯಾರ್ಥಿಗಳು,ಉದ್ಯೋಗಸ್ಥರ ಮೇಲೆ ಪರಿಣಾಮ

ಕಳೆದ ವರ್ಷ (2025) ಅಮೆರಿಕ ಸರ್ಕಾರವು 1 ಲಕ್ಷಕ್ಕೂ ಹೆಚ್ಚು ವೀಸಾಗಳನ್ನು ರದ್ದುಪಡಿಸಿರುವುದಾಗಿ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಅಮೆರಿಕದ ಕಾನೂನು ಉಲ್ಲಂಘಿಸಿದವರು ಹಾಗೂ ಅಪರಾಧ ದಾಖಲೆಗಳನ್ನು ಹೊಂದಿರುವ 1 ಲಕ್ಷಕ್ಕೂ ಹೆಚ್ಚು ವಿದೇಶಿಗರ ವೀಸಾಗಳನ್ನು ರದ್ದುಪಡಿಸಲಾಗಿದೆ. ಅಮೆರಿಕ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಈ ವೀಸಾಗಳ ಪೈಕಿ 8,000 ವಿದ್ಯಾರ್ಥಿ ವೀಸಾಗಳು ಹಾಗೂ 2,500 ವಿಶೇಷ ಉದ್ಯೋಗ ವೀಸಾಗಳು ಸೇರಿವೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿದೆ. 

ನಟ ಯಶ್‌ ಜನ್ಮದಿನಕ್ಕೆ ಬ್ಯಾನರ್ ಅಳವಡಿಕೆ: ಎಫ್‌ಐಆರ್

ನಟ ಯಶ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಬ್ಯಾನರ್ ಹಾಕಿದ್ದಕ್ಕೆ ಸಂಬಂಧಿಸಿದಂತೆ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜಿ.ಎಸ್‌ ಕ್ರಿಯೇಷನ್ಸ್ ಹಾಗೂ ವೇಣು ಗ್ರೂಪ್ಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.