ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಮುಜಾಫರನಗರ: ದೆಹಲಿ–ಸಹರಾನ್ಪುರ ರೈಲು ಮಾರ್ಗದಲ್ಲಿ 10 ಅಡಿ ಉದ್ದದ ಕಬ್ಬಿಣದ ಪೈಪ್ ಪತ್ತೆಯಾಗಿದ್ದು, ಲೋಕೊ ಪೈಲಟ್ ತುರ್ತು ಬ್ರೇಕ್ ಹಾಕಿದ್ದರಿಂದ ಬಹುದೊಡ್ಡ ಅವಘಡವೊಂದು ತಪ್ಪಿದೆ. ಶಮ್ಲಿ ಜಿಲ್ಲೆಯ ಬಲ್ವಾ ಗ್ರಾಮದಲ್ಲಿ ಹಾದುಹೋಗಿರುವ ಪಟ್ಟಿಯ ಮೇಲೆ ಈ ಪೈಪ್ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ರಾತ್ರಿ ಘಟನೆ ನಡೆದಿದ್ದು, ಸಹರಾನ್ಪುರ–ದೆಹಲಿ ಪ್ರಯಾಣಿಕ ರೈಲಿನ ಲೋಕೊ ಪೈಲಟ್ ಹಳಿಯಲ್ಲಿ ಕಬ್ಬಿಣದ ಪೈಪ್ ಕಂಡ ಕೂಡಲೇ ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಠಾಣಾಧಿಕಾರಿ ಚಂದರ್ವೀರ್ ಮಾಹಿತಿ ನೀಡಿದ್ದಾರೆ.
‘ಯಾರೋ ಕಿಡಿಗೇಡಿಗಳು ಭಾರಿ ಗ್ರಾತ್ರದ ಕಬ್ಬಿಣದ ಪೈಪ್ ಅನ್ನು ಹಳಿಯ ಮೇಲೆ ಇರಿಸಿದ್ದಾರೆ. ಲೋಕೊ ಪೈಲಟ್ನ ಸಮಯ ಪ್ರಜ್ಞೆಯಿಂದಾಗಿ ನಡೆಯಬಹುದಾಗಿದ್ದ ಬಹುದೊಡ್ಡ ಅನಾಹುತವೊಂದು ತಪ್ಪಿದೆ’ ಎಂದು ಅವರು ಹೇಳಿದ್ದಾರೆ.
ಶಮ್ಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಮ್ಸೇವಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದ್ದು, ದುಷ್ಕರ್ಮಿಗಳ ಪತ್ತೆ ಬಲೆ ಬೀಸಲಾಗಿದೆ.
ಘಟನೆಯಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು. ಕಬ್ಬಿಣದ ಪೈಪ್ ತೆಗೆದು, ಹಳಿಯನ್ನು ಪರಿಶೀಲನೆ ನಡೆಸಿದ ಬಳಿಕ ರೈಲು ಸಂಚಾರ ಪುನರಾಂಭಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.