ADVERTISEMENT

ಪ್ರಧಾನಿ ವಿರುದ್ಧ ಟಿಆರ್‌ಎಸ್‌ ಸಂಸದರಿಂದ ಹಕ್ಕುಚ್ಯುತಿ, ಸಭಾತ್ಯಾಗ

ಆಂಧ್ರ ಪುನರ್‌ರಚನೆ ಮಸೂದೆ ಕುರಿತ ಹೇಳಿಕೆಗೆ ವಿರೋಧ

ಪಿಟಿಐ
Published 10 ಫೆಬ್ರುವರಿ 2022, 11:28 IST
Last Updated 10 ಫೆಬ್ರುವರಿ 2022, 11:28 IST
ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ರಾಜ್ಯಸಭೆಯ ಟಿಆರ್‌ಎಸ್‌ ಸಂಸದರು ಗುರುವಾರ ಸಭಾತ್ಯಾಗ ಮಾಡಿದರು –ಪಿಟಿಐ ಚಿತ್ರ
ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ರಾಜ್ಯಸಭೆಯ ಟಿಆರ್‌ಎಸ್‌ ಸಂಸದರು ಗುರುವಾರ ಸಭಾತ್ಯಾಗ ಮಾಡಿದರು –ಪಿಟಿಐ ಚಿತ್ರ   

ನವದೆಹಲಿ: ಆಂಧ್ರಪ್ರದೇಶ ಪುನರ್‌ರಚನೆ ಮಸೂದೆ ಕುರಿತ ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೆಲಂಗಾಣ ರಾಷ್ಟ್ರೀಯ ಸಮಿತಿಯ (ಟಿಆರ್‌ಎಸ್‌) ಸಂಸದರು ರಾಜ್ಯಸಭೆಯಲ್ಲಿ ಗುರುವಾರ ಹಕ್ಕುಚ್ಯುತಿ ಮಂಡನೆಗೆ ಮುಂದಾದರು.

ಆದರೆ, ಉಪಸಭಾಪತಿ ಹರಿವಂಶ ಸಿಂಗ್‌ ಅವರು ‘ಹಕ್ಕುಚ್ಯುತಿ ಮಂಡನೆಗೆ ಸಂಬಂಧಿಸಿದ ನೋಟಿಸ್‌ ಅನ್ನು ಗುರುವಾರ ಸ್ವೀಕರಿಸಲಾಗಿದೆ. ಈ ಕುರಿತು ಸಭಾಪತಿ ಅವರೇ ತೀರ್ಮಾನ ತೆಗೆದುಕೊಳ್ಳುವರು. ಹೀಗಾಗಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ನಂತರ, ಶೂನ್ಯ ವೇಳೆಯಲ್ಲಿ ಸಂಸದ ಕೆ.ಕೇಶವರಾವ್ ಅವರು ಪುನಃ ಈ ವಿಷಯ ಪ್ರಸ್ತಾಪಿಸಲು ಮುಂದಾದರು. ಶೂನ್ಯವೇಳೆಯಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಉಪಸಭಾಪತಿ ಹೇಳಿದರು. ಆಗ ಟಿಆರ್‌ಎಸ್‌ ಸಂಸದರು ಕೇಶವರಾವ್ ನೇತೃತ್ವದಲ್ಲಿ ಸಭಾಪತಿ ಪೀಠದ ಮುಂದೆ ಪ್ರತಿಭಟನೆ ಆರಂಭಿಸಿದರು.

ADVERTISEMENT

ನಂತರ, ಸಂಸದರು ಹಕ್ಕುಚ್ಯುತಿಗೆ ಸಂಬಂಧಿಸಿದ ನೋಟಿಸ್‌ಅನ್ನು ರಾಜ್ಯಸಭಾ ಕಾರ್ಯದರ್ಶಿಗೆ ಸಲ್ಲಿಸಿ, ಸಭಾತ್ಯಾಗ ಮಾಡಿದರು.

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ಪ್ರಧಾನಿ ಮೋದಿ,‘ಆಂಧ್ರಪ್ರದೇಶವನ್ನು ವಿಭಜನೆ ಮಾಡಿದ ರೀತಿ ನಾಚಿಕೆ ತರುವಂತಿತ್ತು. ಧ್ವನಿವರ್ಧಕಗಳನ್ನು ಬಂದ್‌ ಮಾಡಲಾಗಿತ್ತು, ಕಾರದ ಪುಡಿಯನ್ನು ಎರಚಲಾಗಿತ್ತು. ಚರ್ಚೆಯೂ ನಡೆಯಲಿಲ್ಲ’ ಎಂದಿದ್ದರು.

‘ರಾಜ್ಯವನ್ನು ಈ ರೀತಿ ವಿಭಜಿಸಿದ್ದು ಸರಿಯಾದ ಕ್ರಮವೇ. ಅದು ಪ್ರಜಾಪ್ರಭುತ್ವವೇ’ ಎಂದೂ ಪ್ರಶ್ನಿಸಿದ್ದ ಅವರು, ಈ ವಿಷಯವಾಗಿ ಈಗಲೂ ಆಂಧ್ರಪ್ರದೇಶ ಹಾಗೂ ತೆಲಂಗಾಣ ಮಧ್ಯೆ ಸಂಘರ್ಷ ಇದೆ ಎಂದು ಛೇಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.