ADVERTISEMENT

ನವದೆಹಲಿ: ಟಿ.ವಿ ಪತ್ರಕರ್ತನ ಮೇಲೆ ಹಲ್ಲೆ, ದರೋಡೆ

ಪಿಟಿಐ
Published 23 ಏಪ್ರಿಲ್ 2023, 12:20 IST
Last Updated 23 ಏಪ್ರಿಲ್ 2023, 12:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೂರ್ವ ದೆಹಲಿಯ ಸಂಜಯ್ ಕೆರೆ ಬಳಿ ನಡೆದುಕೊಂಡು ಹೋಗುತ್ತಿದ್ದ 43 ವಯಸ್ಸಿನ ಟಿ.ವಿ ಪತ್ರಕರ್ತರೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಚಾಕು ತೋರಿಸಿ ದರೋಡೆ ಹಾಗೂ ಹಲ್ಲೆ ನಡೆಸಿದ ಘಟನೆ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಹಲ್ಲೆಗೀಡಾದ ಪತ್ರಕರ್ತ ಮೊಬೈಲ್, ಡೆಬಿಟ್–ಕ್ರೆಡಿಟ್‌ ಕಾರ್ಡುಗಳಿದ್ದ ಪರ್ಸು ಹಾಗೂ ಕಚೇರಿಯ ಗುರುತಿನ ಚೀಟಿ ಕಳೆದುಕೊಂಡಿದ್ದಾರೆ ಎಂದು ಹೇಳಿದರು.

ಝಂಡೇವಾಲನ್‌ನಿಂದ ಬಸ್‌ ಹತ್ತಿದ್ದ ಪತ್ರಕರ್ತ ಮಂಗಳಂ ಚೌಕದಲ್ಲಿ ಇಳಿದಿದ್ದಾರೆ. ಬಳಿಕ ವಾಕಿಂಗ್‌ಗಾಗಿ ಪಾಂಡವ್‌ ನಗರದಲ್ಲಿರುವ ಸಂಜಯ್‌ ಕೆರೆ ಬಳಿ ಬಂದಿದ್ದಾರೆ. ಆ ಸಂದರ್ಭ ಮೂವರು ಯುವಕರು ಪತ್ರಕರ್ತನನ್ನು ಬೆದರಿಸಿ ಅವರಲ್ಲಿದ್ದ ವಸ್ತುಗಳನ್ನು ಕಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ಪತ್ರಕರ್ತ ವಿರೋಧ ವ್ಯಕ್ತಪಡಿಸಿದಾಗ ಪುಂಡರು ಚಾಕುವಿನಿಂದ ಹಲ್ಲೆ ನಡೆಸಿ ಅವರಲ್ಲಿದ್ದ ಅಮೂಲ್ಯ ವಸ್ತುಗಳನ್ನು ದೋಚಿದ್ದಾರೆ ಎಂದು ಪೊಲೀಸರು ವಿವರಿಸಿದರು.

ADVERTISEMENT

‍ಈ ಘಟನೆಯಲ್ಲಿ ಪತ್ರಕರ್ತನ ಬೆನ್ನಿಗೆ ತೀವ್ರ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದೂ ತಿಳಿಸಿದರು.

ಡಕಾಯಿತಿ, ಹಲ್ಲೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.