ನವದೆಹಲಿ: ಯುದ್ಧಪೀಡಿತ ಉಕ್ರೇನ್ನಲ್ಲಿ ಸಿಲುಕಿದ್ದ 369 ಮಂದಿ ಭಾರತೀಯರನ್ನು ಎರಡು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಶೇಷ ವಿಮಾನಗಳು ಬುಕಾರೆಸ್ಟ್, ಬುಡಾಪೆಸ್ಟ್ ಮೂಲಕ ಶುಕ್ರವಾರ ಸ್ವದೇಶಕ್ಕೆ ಕರೆತಂದಿವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ಹಂತದಲ್ಲಿ ಬಂದಿಳಿದ 185 ಭಾರತೀಯ ವಿದ್ಯಾರ್ಥಿಗಳನ್ನು ಕೇಂದ್ರ ಸಚಿವ ರಾವ್ಸಾಹೇಬ್ ಪಾಟೀಲ್ ಸ್ವಾಗತಿಸಿದರು. ಬಳಿಕ ಅವರ ಜತೆ ಮಾತುಕತೆ ನಡೆಸಿದ ಸಚಿವರು, ವಿಮಾನ ನಿಲ್ದಾಣಗಳಿಂದ ತಮ್ಮ ಊರುಗಳಿಗೆ ಮರಳಲು ಸಹಾಯಕ್ಕಾಗಿ ಸರ್ಕಾರ ಆರಂಭಿಸಿರುವ ನೆರವು ಕೇಂದ್ರಗಳ ಸಹಾಯ ಪಡೆಯುವಂತೆ ಸೂಚಿಸಿದರು.
ಮತ್ತೊಂದು ವಿಶೇಷ ವಿಮಾನ ಮಧ್ಯಾಹ್ನ 12 ಗಂಟೆಗೆ ಮುಂಬೈ ತಲುಪಿದ್ದು, 184 ಮಂದಿ ಸ್ವದೇಶಕ್ಕೆ ಆಗಮಿಸಿದರು. ಇವರನ್ನು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬರಮಾಡಿಕೊಂಡರು ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.
‘ಆಪರೇಷನ್ ಗಂಗಾ’ ಕಾರ್ಯಾಚರಣೆ ಮೂಲಕ ಎಲ್ಲ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರಲು ಸರ್ಕಾರವು ಸದಾ ಕಾರ್ಯಪ್ರವೃತ್ತವಾಗಿದೆ ಎಂದು ನಖ್ವಿ ಹೇಳಿದ್ದಾರೆ.
‘ಆಪರೇಷನ್ ಗಂಗಾ’ ಕಾರ್ಯಾಚರಣೆ ಮೂಲಕ ಯುದ್ಧಪೀಡಿತ ಉಕ್ರೇನ್ನಿಂದ ಈಗಾಗಲೇ ಸಾವಿರಾರು ಮಂದಿಯನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಇನ್ನೂ ಹಲವಾರು ಮಂದಿ ಉಕ್ರೇನ್ ಹಾಗೂ ಅದರ ನೆರೆ ರಾಷ್ಟ್ರಗಳಲ್ಲಿ ಸಿಲುಕಿದ್ದು, ಅವರನ್ನು ಮರಳಿ ಕರೆತರುವ ಕಾರ್ಯ ಪ್ರಗತಿಯಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.