ADVERTISEMENT

ಸರಕು ಸಾಗಣೆ ರೈಲು ಡಿಕ್ಕಿ; ಎರಡು ಆನೆಗಳ ಸಾವು

ಪಿಟಿಐ
Published 4 ಫೆಬ್ರುವರಿ 2021, 10:08 IST
Last Updated 4 ಫೆಬ್ರುವರಿ 2021, 10:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭುವನೇಶ್ವರ: ಸರಕು ಸಾಗಣೆ ರೈಲು ಡಿಕ್ಕಿ ಹೊಡೆದ ಪರಿಣಾಮ ಎರಡು ಆನೆಗಳು ಮೃತಪಟ್ಟ ಘಟನೆಒಡಿಶಾದ ಸುಂದರಗಡ ಜಿಲ್ಲೆಯಲ್ಲಿ ನಡೆದಿದೆ.

‘ಬುಧವಾರ ರಾತ್ರಿ ಬಿಸ್ರಾ ಪ್ರದೇಶದ ಮಹಿಪಾನಿ ಬಳಿ ಹೌರಾ-ಮುಂಬೈ ಮಾರ್ಗದ ರೈಲ್ವೆ ಹಳಿಯನ್ನುಆನೆಗಳು ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಇದರಿಂದಾಗಿ ಸ್ವಲ್ಪ ಸಮಯದವರೆಗೆ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು’ ಎಂದು ಆಗ್ನೇಯ ರೈಲ್ವೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಸರಕು ಸಾಗಣೆ ರೈಲು, ಶಾಲಿಮಾರ್‌ನಿಂದ ನಾಸಿಕ್‌ನತ್ತ ಚಲಿಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದೆ. ಈ ವೇಳೆ ಉಂಟಾದ ಹಾನಿಯನ್ನು ಸರಿಪಡಿಸಲಾಗಿದೆ. ಸದ್ಯ ರೈಲ್ವೆ ಸಂಚಾರ ಪುನರಾಂಭಗೊಂಡಿದೆ’ ಎಂದು ರೈಲ್ವೆ ಅಧಿಕಾರಿ ನಿಶಾಂತ್‌ ಕುಮಾರ್‌ ಅವರು ಮಾಹಿತಿ ನೀಡಿದರು.

ADVERTISEMENT

ಈ ಘಟನೆಯು ರೈಲ್ವೆ ಇಲಾಖೆ ಮತ್ತು ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

‘ಆನೆಗಳ ವಲಯದಲ್ಲಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಲು ನಾವು ಪ್ರಯತ್ನಿಸಿದ್ಧೇವೆ. ಆನೆಗಳು ಹಳಿಯ ಬಳಿಯಿರುವ ಬಗ್ಗೆ ನಾವು ಅಧಿಕಾರಿಗಳಿಗೆ ಮಾಹಿತಿಯನ್ನು ಕೂಡ ನೀಡಿದ್ದೆವು’ ಎಂದು ರೂರ್ಕೆಲಾ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಂಕಾಧರ್ ಬೆಹೆರ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.