ಮುಂಬೈ: ಶಿವಸೇನಾದ ಮತ್ತಿಬ್ಬರು ಶಾಸಕರು ಗುಜರಾತಿನ ಸೂರತ್ಗೆ ತೆರಳಿರುವುದಾಗಿ ವರದಿಯಾಗಿದೆ.
ಮಾಹಿಮ್ ಕ್ಷೇತ್ರದ ಶಾಸಕ ಸದಾ ಸರ್ವಾಂಕರ್ ಮತ್ತು ಕುರ್ಲಾ ಕ್ಷೇತ್ರದ ಶಾಸಕ ಮಂಗೇಶ್ ಕುಡಾಲ್ಕರ್ ಅವರು ಸೂರತ್ಗೆ ತೆರಳಿರುವುದಾಗಿ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್ಐ’ ಟ್ವೀಟ್ ಮಾಡಿದೆ.
ಶಿವಸೇನಾ ಬಂಡಾಯ ಶಾಸಕ ಏಕನಾಥ್ ಶಿಂಧೆ ನೇತೃತ್ವದ ಶಾಸಕರ ಗುಂಪು ಬಂಡಾಯ ಸಾರಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.
ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ಭವಿಷ್ಯ ಇನ್ನೂ ಅತಂತ್ರವಾಗಿಯೇ ಇದೆ. ಅಘಾಡಿ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಶಿಂಧೆ ಹೇಳಿಕೊಂಡಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಪಕ್ಷದ ಶಾಸಕರು ಬಯಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಉದ್ಧವ್ ಠಾಕ್ರೆ ಅವರು ಬುಧವಾರ ಸಂಜೆ ಪ್ರತಿಕ್ರಿಯಿಸಿದ್ದಾರೆ. ಜತೆಗೆ, ‘ಶಿವಸೇನಾ ಶಾಸಕರೇ ಮುಖ್ಯಮಂತ್ರಿಯಾಗಬೇಕು’ ಎಂದು ಅವರು ಷರತ್ತು ಹಾಕಿದ್ದಾರೆ.
ಆದರೆ, ಉದ್ಧವ್ ಅವರು ರಾಜೀನಾಮೆ ನೀಡದೆ ಇದ್ದರೂ ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ತೊರೆದು ತಮ್ಮ ನಿವಾಸ ‘ಮಾತೋಶ್ರೀ’ಗೆ ಹೋಗಿದ್ದಾರೆ.
ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿಂಧೆ, ‘ಶಿವಸೇನಾ ಉಳಿಯಬೇಕು ಎಂದಿದ್ದರೆ, ಎನ್ಸಿಪಿ ಮತ್ತು ಕಾಂಗ್ರೆಸ್ ಜತೆಗಿನ ಅಸಹಜ ಮೈತ್ರಿಯನ್ನು ತೊರೆಯಿರಿ’ ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಿಂಧೆ ಅವರ ಜತೆಗೆ ಬಿಜೆಪಿಯ ಹಿರಿಯ ನಾಯಕರು ಸಂಪರ್ಕದಲ್ಲಿ ಇದ್ದಾರೆ. ಶಿವಸೇನಾ ಭಿನ್ನಮತೀಯ ಶಾಸಕರ ನಾಯಕ ಏಕನಾಥ ಶಿಂಧೆ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಸ್ತಾಪವನ್ನು ಎನ್ಸಿಪಿ ಮತ್ತು ಕಾಂಗ್ರೆಸ್ ಇರಿಸಿವೆ ಎಂದು ಮೂಲಗಳು ಹೇಳಿವೆ.
ಆದರೆ, ಈ ಪ್ರಸ್ತಾಪವನ್ನು ಶಿಂಧೆ ನಿರಾಕರಿಸಿದ್ದಾರೆ. ‘ಸೈದ್ಧಾಂತಿಕ ವಿರೋಧಿಗಳ ಜತೆಗೆ ಅಸಹಜ ಮೈತ್ರಿ ಸಾಧ್ಯವೇ ಇಲ್ಲ’ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಇಂತಹ ಯಾವುದೇ ಪ್ರಸ್ತಾಪ ಬಂದಿಲ್ಲ’ ಎಂದು ಶಿವಸೇನಾ ಹೇಳಿದೆ.
ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.