ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡದ ಅಭಿಮಾನಿಗಳು
ಪಿಟಿಐ ಚಿತ್ರ
ಮುಂಬೈ: ದುಬೈನಲ್ಲಿ ನಡೆಯಲಿರುವ ಭಾರತ–ಪಾಕಿಸ್ತಾನ ಏಷ್ಯಾ ಕಪ್ ಪಂದ್ಯದ ಕುರಿತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಮತ್ತು ಕ್ರೀಡೆ ಮತ್ತು ಯುವಜನ ಸಚಿವ ಮನ್ಸುಖ್ ಮಾಂಡವೀಯ ಅವರ ವಿರುದ್ಧ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ.
‘ಪಾರಿವಾಳ, ನಾಯಿಗಳು ಮತ್ತು ಆನೆಗಳಿಗಾಗಿ ಜನರು ಬೀದಿಗಿಳಿಯುತ್ತಾರೆ... ಇದು ನಿಜಕ್ಕೂ ಒಳ್ಳೆಯದು. ಆದರೆ, ಪೆಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಜನರ ವಿಷಯದಲ್ಲಿ ಇದೇ ಮಾನವೀಯತೆ ಎಲ್ಲಿ ಹೋಗಿರುತ್ತದೆ... ಇಲ್ಲಿ ಸಿಂಧೂರವು ಅಳಿಸಿಹೋಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.
‘ಆಪರೇಷನ್ ಸಿಂಧೂರವು ಮುಗಿದಿಲ್ಲ ಎಂದು ನಮ್ಮ ರಕ್ಷಣಾ ಸಚಿವರು ಹೇಳುತ್ತಾರೆ. ಬಿಸಿ ಸಿಂಧೂರವು ನನ್ನ ರಕ್ತದಲ್ಲಿ ಹರಿಯುತ್ತಿದೆ ಎಂದು ಪ್ರಧಾನಿ ಹೇಳುತ್ತಾರೆ... ಬಿಸಿ ಸಿಂಧೂರವು ಯಾವಾಗ ತಣ್ಣಗಾಯಿತು’ ಎಂದು ಪ್ರಶ್ನಿಸಿದರು.
ಈ ಬಗ್ಗೆ ಶಿವಸೇನಾ (ಉದ್ಧವ್ ಬಣ) ಸಂಸದ ಸಂಜಯ್ ರಾವುತ್ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ‘ಪಾಕಿಸ್ತಾನದೊಂದಿಗೆ ಪಂದ್ಯ ನಡೆಯುತ್ತದೆ ಎಂದಾದರೆ ಅಲ್ಲಿ ದೊಡ್ಡ ಮಟ್ಟದ ಬೆಟ್ಟಿಂಗ್, ಆನ್ಲೈನ್ ಗ್ಯಾಂಬ್ಲಿಂಗ್ ನಡೆಯುತ್ತದೆ. ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಭಾಗಿಯಾಗುತ್ತಾರೆ. ಜಯ್ ಶಾ (ಅಮಿತ್ ಶಾ ಮಗ), ಗುಜರಾತ್ನ ಬಹಳ ಪ್ರಮುಖ ವ್ಯಕ್ತಿ ಈಗ ಕ್ರಿಕೆಟ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ (ಐಸಿಸಿ ಮುಖ್ಯಸ್ಥ ಸ್ಥಾನ). ಇದರಲ್ಲಿ ಬಿಜೆಪಿಗೆ ಹಣಕಾಸಿನ ಲಾಭವೇನಾದರೂ ಇದೆಯೇ’ ಎಂದು ರಾವುತ್ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.