ADVERTISEMENT

ಆರೆ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣ ಹಿಂಪಡೆಯಲು ಉದ್ಧವ್ ಆದೇಶ

ಪಿಟಿಐ
Published 2 ಡಿಸೆಂಬರ್ 2019, 4:45 IST
Last Updated 2 ಡಿಸೆಂಬರ್ 2019, 4:45 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ಮುಂಬೈ: ಮುಂಬೈ ಮೆಟ್ರೊ-3ನೇ ಹಂತದ ಕಾರ್ ಶೆಡ್ ನಿರ್ಮಾಣ ಕಾಮಗಾರಿಗಾಗಿ ಆರೆ ಕಾಲೊನಿಯಲ್ಲಿರುವ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿದ್ದಆರೆ ಪ್ರತಿಭಟನಾಕಾರರ ಮೇಲೆ ದಾಖಲಾಗಿದ್ದಎಲ್ಲ ಪ್ರಕರಣಗಳನ್ನು ಹಿಂಪಡೆಯಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ.

ಅಭಿವೃದ್ದಿ ಬಗ್ಗೆ ಮಾತನಾಡುವಾಗ ಎಲ್ಲರನ್ನೂ ಪರಿಗಣಿಸಬೇಕಾಗುತ್ತದೆ. ಆರೆಯಲ್ಲಿ ಮರಗಳ ಹನನವನ್ನು ಪರಿಸರ ಪ್ರೇಮಿಗಳು ವಿರೋಧಿಸಿದ್ದರು. ಅವರ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಭಾನುವಾರ ಸಂಜೆ ವಿಧಾನ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಉದ್ಧವ್ ಹೇಳಿದ್ದಾರೆ.

ನಮ್ಮ ಜನರು ಆರೋಗ್ಯಕರವಾಗಿ ಮತ್ತು ಖುಷಿಯಾಗಿರಬೇಕು. ಆರೆ ಎಂಬುದು ಕೇವಲ ಮರಗಳ ಬಗ್ಗೆ ಅಲ್ಲ ಅದುಪರಿಸರ ವ್ಯವಸ್ಥೆಗೆ ಸಂಬಂಧಪಟ್ಟಿದ್ದು.ಮೆಟ್ರೊ ಕಾರ್ ಶೆಡ್ ಕಾಮಗಾರಿಯನ್ನಷ್ಟೇ ನಿಲ್ಲಿಸಲಾಗಿದೆ ಎಂದಿದ್ದಾರೆ.

ಆರೆ ಅರಣ್ಯ ಪ್ರದೇಶದಲ್ಲಿ ಮರಗಳನ್ನು ಕತ್ತರಿಸುವುದನ್ನು ವಿರೋಧಿಸಿ ಪ್ರತಿಭಟಿಸಿದ್ದ ಪರಿಸರ ರಕ್ಷಣೆಯ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯುವಂತೆ ನಾನು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಎಂದಿದ್ದಾರೆ ಠಾಕ್ರೆ.

ಅಕ್ಟೋಬರ್ ಮೊದಲ ವಾರದಲ್ಲಿ ಮೆಟ್ರೊ ಕಾರ್ ಶೆಡ್ ನಿರ್ಮಾಣಕ್ಕಾಗಿ ಆರೆ ಅರಣ್ಯ ಕಾಲೊನಿಯಲ್ಲಿ ಮರಗಳನ್ನು ಕತ್ತರಿಸುವುದನ್ನು ಪರಿಸರ ಪ್ರೇಮಿಗಳು ವಿರೋಧಿಸಿದ್ದರು. ಪ್ರತಿಭಟನೆ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಸಂಘರ್ಷವೇರ್ಪಟ್ಟಿದ್ದು ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಪರಿಸರ ಪ್ರೇಮಿಗಳ ಸಂಘಟನೆ ಒತ್ತಾಯಿಸಿತ್ತು. ಯುವ ಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಇದನ್ನುಬೆಂಬಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.