ಮುಂಬೈ: ಹಿಂದುತ್ವದ ಕುರಿತು ಶಿವಸೇನಾದ ಬದ್ಧತೆಯನ್ನು ಪುನರುಚ್ಚರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ₹1 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ನೂರು ದಿನಗಳು ಪೂರೈಸಿದ ಹಿನ್ನೆಲೆಯಲ್ಲಿ ಮಗ ಆದಿತ್ಯ ಠಾಕ್ರೆ ಹಾಗೂ ಪಕ್ಷದ ಪ್ರಮುಖ ನಾಯಕರೊಂದಿಗೆ ಅಯೋಧ್ಯೆಗೆ ಠಾಕ್ರೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದರು.‘ನಾನು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಂಡಿದ್ದೇನೇ ವಿನಃ ಹಿಂದುತ್ವದೊಂದಿಗೆ ಅಲ್ಲ. ಬಿಜೆಪಿ ಒಂದೇ ಹಿಂದುತ್ವವಲ್ಲ’ ಎಂದಿದ್ದಾರೆ.
‘ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬ್ಯಾಂಕ್ ಖಾತೆಯನ್ನು ತೆರೆದಿದ್ದು, ತಮ್ಮ ಕುಟುಂಬದ ಟ್ರಸ್ಟ್ ಅಥವಾ ಪಕ್ಷದ ವತಿಯಿಂದ ₹1 ಕೋಟಿಯನ್ನು ಟ್ರಸ್ಟ್ ಖಾತೆಗೆ ಜಮಾ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗಬೇಕು.ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಳಿ ಮಾತುಕತೆ ನಡೆಸಿದ್ದೆ. ಇಲ್ಲಿ ಜಾಗ ದೊರೆತರೆ ಭಕ್ತರಿಗಾಗಿ ಮಹಾರಾಷ್ಟ್ರ ಸದನ ನಿರ್ಮಾಣ ಮಾಡುವ ಯೋಜನೆ ಇದೆ’ ಎಂದರು.
ತಮ್ಮ ತಂದೆಯೊಂದಿಗೆ ಸೇರಿ ರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸಿದ್ದ ನೆನಪುಗಳನ್ನೂ ಠಾಕ್ರೆ ಮೆಲುಕು ಹಾಕಿದರು.
ಮೂವರಿಗೆ ಗೃಹ ಬಂಧನ: ಶ್ರೀರಾಮನನ್ನು ಟೀಕಿಸಿದ್ದ ಪಕ್ಷಗಳ ಜೊತೆ ಸೇರಿ ಉದ್ಧವ್ ಠಾಕ್ರೆ ಸರ್ಕಾರ ರಚಿಸಿದ್ದಾರೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ಭೇಟಿ ವೇಳೆ ಕಪ್ಪು ಬಟ್ಟೆ ಪ್ರದರ್ಶಿಸುವುದಾಗಿ ಬೆದರಿಕೆ ಹಾಕಿದ್ದ ಇಬ್ಬರು ಅರ್ಚಕರು ಸೇರಿದಂತೆ ಮೂವರನ್ನು ಅಯೋಧ್ಯೆ ಜಿಲ್ಲಾಡಳಿತ ಗೃಹ ಬಂಧನದಲ್ಲಿ ಇರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.