ನವದೆಹಲಿ: ಉದ್ಯಮ ರಂಗದ ಪರಿಣತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಿದವರು ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳಿಗೆ ವಿಶ್ವವಿದ್ಯಾಲಯಗಳ ಕುಲಪತಿಗಳಾಗುವ ಅರ್ಹತೆ ಶೀಘ್ರದಲ್ಲಿ ದೊರಕಲಿದೆ. ಇದಕ್ಕಾಗಿ, ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಹೊಸ ನಿಯಮಗಳ ಕರಡನ್ನು ರೂಪಿಸಿದೆ.
ಯುಜಿಸಿ ಸಿದ್ಧಪಡಿಸಿರುವ ಕರಡುವಿನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಲಾಗಿದೆ. ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ (ಎಂ.ಇ) ಮತ್ತು ತಂತ್ರಜ್ಞಾನ ಸ್ನಾತಕೋತ್ತರ ಪದವಿ (ಎಂ.ಟೆಕ್) ಪದವಿ ಪಡೆದವರು ಕನಿಷ್ಠ ಶೇ 55ರಷ್ಟು ಅಂಕಗಳನ್ನು ಗಳಿಸಿದ್ದರೆ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇರವಾಗಿ ನೇಮಕಗೊಳ್ಳುವ ಅರ್ಹತೆ ಪಡೆಯುತ್ತಾರೆ. ಅವರು ಯುಜಿಸಿಯ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್ಇಟಿ) ಅರ್ಹತೆ ಪಡೆದುಕೊಳ್ಳುವ ಅಗತ್ಯ ಇಲ್ಲ.
ಪ್ರಾಧ್ಯಾಪಕರು ಅತ್ಯುನ್ನತ ಶಿಕ್ಷಣ ಪಡೆದ ವಿಷಯದಲ್ಲಿ ಮಾತ್ರ ಬೋಧನೆ ಮಾಡಲು ಅವಕಾಶ ಕಲ್ಪಿಸುವುದಕ್ಕಾಗಿಯೂ ನಿಯಮಗಳಲ್ಲಿ ಬದಲಾವಣೆ ಮಾಡಲು ಉದ್ದೇಶಿಸಲಾಗಿದೆ. ಉದಾಹರಣೆಗೆ ಒಬ್ಬ ಪ್ರಾಧ್ಯಾಪಕರು ರಾಸಾಯನಿಕ ವಿಜ್ಞಾನದಲ್ಲಿ ಪಿಎಚ್ಡಿ, ಗಣಿತಶಾಸ್ತ್ರದಲ್ಲಿ ಪದವಿ ಮತ್ತು ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, ರಾಸಾಯನಿಕ ವಿಜ್ಞಾನ ವಿಷಯವನ್ನು ಬೋಧಿಸಲು ಮಾತ್ರ ಅವರಿಗೆ ಅವಕಾಶ ಇರುತ್ತದೆ.
ಹಾಗೆಯೇ, ತಮ್ಮ ಸ್ನಾತಕೋತ್ತರ ಪದವಿ ಅಲ್ಲದೆ ಬೇರೊಂದು ವಿಷಯದಲ್ಲಿ ಎನ್ಇಟಿ ಅರ್ಹತೆ ಪಡೆದವರು ಆ ವಿಷಯವನ್ನು ಬೋಧನೆ ಮಾಡಬಹುದು ಎಂಬ ನಿಯಮವನ್ನೂ ರೂಪಿಸಲಾಗಿದೆ.
ಬಹುಶಿಸ್ತೀಯ ಹಿನ್ನೆಲೆಯನ್ನು ಹೊಂದಿರುವವರನ್ನು ಬೋಧನಾ ಸಿಬ್ಬಂದಿಯಾಗಿ ನೇಮಕ ಮಾಡುವುದಕ್ಕೆ ಕೂಡ ಹೊಸ ಕರಡು ಅವಕಾಶ ಮಾಡಿಕೊಡುತ್ತದೆ. ಶಿಕ್ಷಣದ ವ್ಯಾಪ್ತಿ ಮತ್ತು ಸ್ವಾತಂತ್ರ್ಯವನ್ನು ವಿಸ್ತರಿಸುವುದು ಹಾಗೂ ಬೋಧನೆಯ ಕುರಿತು ಅಮಿತವಾದ ಉತ್ಸಾಹ ಹೊಂದಿರುವವರನ್ನು ಬೋಧನಾ ಸಿಬ್ಬಂದಿಯಾಗಿ ನೇಮಿಸಲು ಅವಕಾಶ ಕಲ್ಪಿಸುವುದು ಈ ಬದಲಾವಣೆಗಳ ಪ್ರಾಥಮಿಕ ಉದ್ದೇಶ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಹೇಳಿದ್ದಾರೆ.
ನೂತನ ಬೋಧನಾ ವಿಧಾನಗಳ ಶೋಧ, ಡಿಜಿಟಲ್ ಕಂಟೆಂಟ್ ಸೃಷ್ಟಿ, ಸಂಶೋಧನೆಗೆ ನಿಧಿ ಸಂಗ್ರಹಕ್ಕೆ ಕೊಡುಗೆಯಂತಹ ವೃತ್ತಿಪರ ಸಾಧನೆಯನ್ನು ಗುರುತಿಸುವುದಕ್ಕಾಗಿ ವಿದ್ಯಾರ್ಹತೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಬೋಧನಾ ಸಿಬ್ಬಂದಿಯ ಬಡ್ತಿಗೆ ಇದ್ದ ಶೈಕ್ಷಣಿಕ ಕ್ಷಮತೆ ಸೂಚ್ಯಂಕ (ಎಪಿಐ) ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.
ಅಭ್ಯರ್ಥಿಗಳು ಶೈಕ್ಷಣಿಕವಾಗಿ ಉಂಟುಮಾಡಿರುವ ವಿಸ್ತೃತ ಪರಿಣಾಮವನ್ನು ಆಯ್ಕೆ ಸಮಿತಿಯು ಮೌಲ್ಯಮಾಪನ ಮಾಡಲಿದೆ. ಬೋಧನೆಯಲ್ಲಿ ನಾವೀನ್ಯ, ತಂತ್ರಜ್ಞಾನ ಅಭಿವೃದ್ಧಿ, ಉದ್ಯಮಶೀಲತೆ, ಪುಸ್ತಕ ರಚನೆ, ಡಿಜಿಟಲ್ ಕಲಿಕಾ ಸಂಪನ್ಮೂಲಗಳ ಸೃಷ್ಟಿ, ಸಮುದಾಯ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು, ಭಾರತೀಯ ಭಾಷೆಗಳಿಗೆ ನೀಡಿದ ಉತ್ತೇಜನ, ಸುಸ್ಥಿರ ಪದ್ಧತಿಗಳು, ಇಂಟರ್ನ್ಶಿಪ್ ಮೇಲ್ವಿಚಾರಣೆ, ಪ್ರಾಜೆಕ್ಟ್ಗಳು ಅಥವಾ ಯಶಸ್ವೀ ನವೋದ್ಯಮಗಳಲ್ಲಿ ಮಾಡಿದ ಕೆಲಸಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಜಗದೀಶ್ ಕುಮಾರ್ ಹೇಳಿದ್ದಾರೆ.
ವೈವಿಧ್ಯಮಯ ಪ್ರತಿಭಾವಂತರನ್ನು ಗುರುತಿಸಿ ಭಾರತದ ಶಿಕ್ಷಣದ ಭವಿಷ್ಯವನ್ನು ಚಲನಶೀಲಗೊಳಿಸಲು ದಾರಿ ಮಾಡಿಕೊಡುವುದೇ ನಮ್ಮ ಉದ್ದೇಶಧರ್ಮೇಂದ್ರ ಪ್ರಧಾನ್ ಕೇಂದ್ರ ಶಿಕ್ಷಣ ಸಚಿವ
ಜಿಗುಟು ವಿದ್ಯಾರ್ಹತೆಯ ಬದಲು ಜ್ಞಾನ ಶಾಖೆ ಹಾಗೂ ಸಮುದಾಯಕ್ಕೆ ನೀಡಿದ ಕೊಡುಗೆಗಳಿಗೆ ಹೆಚ್ಚಿನ ಮೌಲ್ಯ ಇದೆ ಎಂಬುದನ್ನು ಖಾತರಿಪಡಿಸುವುದೇ ಬದಲಾವಣೆಯ ಉದ್ದೇಶಜಗದೀಶ್ ಕುಮಾರ್ ಯುಜಿಸಿ ಅಧ್ಯಕ್ಷ
ಕುಲಪತಿ ನೇಮಕದಲ್ಲಿ ಯುಜಿಸಿ ಕರಡು ನಿಯಮಗಳು ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವನ್ನು ಕೊಡುತ್ತವೆ. ಬೋಧನೆಯ ಅನುಭವ ಇಲ್ಲದವರು ಕೂಡ ಕುಲಪತಿಯಾಗಲು ಅವಕಾಶ ನೀಡಲಾಗಿದೆ. ಇದು ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯದ ಹಕ್ಕುಗಳ ಮೇಲೆ ನೇರ ಹೊಡೆತ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಇದು ಕೇಂದ್ರ ಸರ್ಕಾರದ ನಿರಂಕುಶ ನಡೆ. ಅಧಿಕಾರವನ್ನು ಕೇಂದ್ರೀಕರಿಸುವ ಹುನ್ನಾರ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ರಾಜ್ಯ ಸರ್ಕಾರಗಳನ್ನು ನಿರ್ಲಕ್ಷಿಸುವ ಹುನ್ನಾರ. ಶಿಕ್ಷಣ ಕ್ಷೇತ್ರವು ಜನಪ್ರತಿನಿಧಿಗಳ ಕೈಯಲ್ಲಿ ಇರಬೇಕೇ ಹೊರತು ಬಿಜೆಪಿ ಸರ್ಕಾರದ ಕುಮ್ಮಕ್ಕಿನಂತೆ ವರ್ತಿಸುವ ರಾಜ್ಯಪಾಲರ ನಿಯಂತ್ರಣದಲ್ಲಿ ಅಲ್ಲ’ ಎಂದು ಹೇಳಿದ್ದಾರೆ
ಕುಲಪತಿ ಆಯ್ಕೆ ಸಮಿತಿ ಹೇಗಿರಬೇಕು ಎಂಬುದನ್ನು ಕೂಡ ಬದಲಾಯಿಸಲು ಉದ್ದೇಶಿಸಲಾಗಿದೆ. ಆಯ್ಕೆ ಸಮಿತಿಯಲ್ಲಿ ಮೂವರು ಸದಸ್ಯರು ಮಾತ್ರ ಇರುತ್ತಾರೆ. ಕುಲಾಧಿಪತಿ ಯುಜಿಸಿ ಮತ್ತು ವಿಶ್ವವಿದ್ಯಾಲಯದ ಸರ್ವೋಚ್ಚ ಸಮಿತಿಯು ತಲಾ ಒಬ್ಬೊಬ್ಬ ಸದಸ್ಯರನ್ನು ನೇಮಿಸಲಿದೆ. ಈಗ ಐವರು ಸದಸ್ಯರ ಆಯ್ಕೆ ಸಮಿತಿಯ ವ್ಯವಸ್ಥೆ ಇದೆ. ವಿಶ್ವವಿದ್ಯಾಲಯ ಅಥವಾ ಕಾಲೇಜುಗಳ ಬೋಧಕ ಹುದ್ದೆಗೆ ನೇಮಕ ಅಥವಾ ಬಡ್ತಿಯ ಮಾನದಂಡಗಳನ್ನೂ ಬದಲಾಯಿಸಲಾಗಿದೆ. ಸಂಶೋಧನೆ ಅಥವಾ ಬೋಧನಾ ಪ್ರಯೋಗಾಲಯ ಅಭಿವೃದ್ಧಿ ಬೋಧನೆಗೆ ಕೊಡುಗೆಯಂತಹ ವಿವಿಧ ಸಾಧನೆಗಳನ್ನು ನೇಮಕ ಮತ್ತು ಬಡ್ತಿಗೆ ಪರಿಗಣಿಸಲಾಗುವುದು.
ವಿಶ್ವವಿದ್ಯಾಲಯ ಅಥವಾ ಪ್ರಮುಖ ಶೈಕ್ಷಣಿಕ ಸಂಸ್ಥೆ ಅಥವಾ ಸಂಶೋಧನಾ ಸಂಸ್ಥೆಯಲ್ಲಿ ಆಡಳಿತಾತ್ಮಕ ಹುದ್ದೆಯಲ್ಲಿ ಅನುಭವ ಮತ್ತು ಪ್ರಾಧ್ಯಾಪಕ ಹುದ್ದೆಯ ಕನಿಷ್ಠ 10 ವರ್ಷಗಳ ಅನುಭವ ಇದ್ದವರಿಗೆ ಮಾತ್ರ ವಿಶ್ವವಿದ್ಯಾಲಯದ ಕುಲಪತಿಯಾಗಲು ಈಗ ಅವಕಾಶ ಇದೆ
ಉದ್ಯಮ ಸಾರ್ವಜನಿಕ ಆಡಳಿತ ನೀತಿ ನಿರೂಪಣೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜೊತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಅರ್ಹತೆ ಪಡೆಯುತ್ತಾರೆ
ಅರ್ಥಶಾಸ್ತ್ರಜ್ಞ ಅಜಿತ್ ರಾನಡೆ ಅವರನ್ನು ಪುಣೆಯ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಆ್ಯಂಡ್ ಇಕನಾಮಿಕ್ಸ್ನ ಕುಲಪತಿ ಹುದ್ದೆಯಿಂದ ಕೆಲವು ತಿಂಗಳ ಹಿಂದೆ ವಜಾ ಮಾಡಲಾಗಿತ್ತು. 10 ವರ್ಷಗಳ ಬೋಧನಾ ಅನುಭವವನ್ನು ಅವರು ಹೊಂದಿಲ್ಲ ಎಂಬುದು ವಜಾ ಮಾಡಲು ಕಾರಣವಾಗಿತ್ತು. ಆದರೆ ಅರ್ಥಶಾಸ್ತ್ರದಲ್ಲಿ ಅವರಿಗೆ ವ್ಯಾಪಕ ಅನುಭವ ಇತ್ತು. ಬಾಂಬೆ ಹೈಕೋರ್ಟ್ ಅವರಿಗೆ ಹುದ್ದೆಯನ್ನು ಮರಳಿ ನೀಡಲು ಆದೇಶಿಸಿತ್ತು. ಹಾಗಿದ್ದರೂ ಕಳೆದ ನವೆಂಬರ್ನಲ್ಲಿ ರಾನಡೆ ಕುಲಪತಿ ಹುದ್ದೆಗೆ ರಾಜೀನಾಮೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.