ವಿಶ್ವಸಂಸ್ಥೆ: ವಿಶ್ವಸಂಸ್ಥೆಯು ಇಂದು ಸಮಗ್ರವಾದ ಸುಧಾರಣಾ ಚಿಂತನೆಯಿಲ್ಲದೆ ‘ಆತ್ಮವಿಶ್ವಾಸದ ಬಿಕ್ಕಟ್ಟು’ ಎದುರಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಪರಸ್ಪರ ಸಂಪರ್ಕವುಳ್ಳ ಈ ಜಗತ್ತು ಬಹುಪಕ್ಷೀಯ ಸುಧಾರಣೆ ಬಯಸಲಿದೆ. ಇಂಥ ಸುಧಾರಣೆಯು ಎಲ್ಲ ಭಾಗಿದಾರರಿಗೆ ಧ್ವನಿ ನೀಡಲಿದೆ ಎಂದರು. ಅವರು ಮಾನವ ಕಲ್ಯಾಣದ ಸಮಕಾಲೀನ ಸವಾಲುಗಳ ಕುರಿತು ಬೆಳಕು ಚೆಲ್ಲಿದರು.
ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜನವರಿ 1, 2021ರಿಂದ ಜಾರಿಗೆ ಬರುವಂತೆ ಎರಡು ವರ್ಷದ ಸದಸ್ಯತ್ವ (ಶಾಶ್ವತವಲ್ಲದ) ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಮೋದಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಹಳತಾದ ರಚನೆಗಳಿಂದನಾವು ಇಂದಿನ ಸವಾಲುಗಳನ್ನು ಎದುರಿಸಲು ಆಗದು ಎಂದು ಪ್ರಧಾನಿ ಹೇಳಿದರು.
ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಉನ್ನತ ಮಟ್ಟದ ಸಭೆಗೆ ಅವರು ಈ ಕುರಿತು ವಿಡಿಯೊ ಸಂದೇಶ ರವಾನಿಸಿದ್ದಾರೆ.
193 ಸದಸ್ಯತ್ವ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು, ಭಯೋತ್ಪಾದನೆ ಹತ್ತಿಕ್ಕುವ, ಬಹುಪಕ್ಷೀಯ ಸುಧಾರಣೆಗೆ ಒತ್ತು ನೀಡುವ, ಸೇರ್ಪಡೆಯುಕ್ತ ಅಭಿವೃದ್ಧಿಗೆ ಆದ್ಯತೆ ನೀಡುವ ದೂರದೃಷ್ಟಿಯ ಚಿಂತನೆಗಳನ್ನು ಒಳಗೊಂಡ ನಿರ್ಣಯವನ್ನು ಅಂಗೀಕರಿಸಿತು. ಅಲ್ಲದೆ, ಕೋವಿಡ್-19 ಪಿಡುಗನ್ನು ಉತ್ತಮ ಸಿದ್ಧತೆಯೊಂದಿಗೆ ಎದುರಿಸಬೇಕಾದ ಅಗತ್ಯವನ್ನು ಪ್ರತಿಪಾದಿಸಿತು.
ಇಂಥ ಘೋಷಣೆಯು ವಿಶ್ವಸಂಸ್ಥೆಯು ಸುಧಾರಣೆ ಆಗಬೇಕಾದ ಅಗತ್ಯವನ್ನು ಹೇಳಲಿದೆ. ಈ ನಿಟ್ಟಿನಲ್ಲಿ ಭಾರತ ವಿಶ್ವದ ಎಲ್ಲ ದೇಶಗಳ ಜೊತೆಗೆ ಒಗ್ಗೂಡಿ ಕಾರ್ಯನಿರ್ವಹಿಸಲು ಬಯಸಲಿದೆ ಎಂದು ಮೋದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.