ನವದೆಹಲಿ: ಸರ್ಕಾರಿ ಸ್ವಾಮ್ಯದ ಯೂನಿಯನ್ ಬ್ಯಾಂಕ್ ₹ 7.25 ಕೋಟಿ ವೆಚ್ಚದಲ್ಲಿ, ಕೃಷ್ಣಮೂರ್ತಿ ವಿ.ಸುಬ್ರಹ್ಮಣಿಯನ್ ರಚಿಸಿರುವ ಕೃತಿಯ 2 ಲಕ್ಷ ಪ್ರತಿಗಳನ್ನು ಖರೀದಿಸಿದೆ. ಇದರ ಹಿಂದಿನ ಹಿತಾಸಕ್ತಿ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
‘ಇಂಡಿಯಾ@100: ಎನ್ವಿಷನಿಂಗ್ ಟುಮಾರೊ‘ಸ್ ಎಕನಾಮಿಕ್ ಪವರ್ ಹೌಸ್’ ಶೀರ್ಷಿಕೆಯ 1,99,872 ಪ್ರತಿಗಳನ್ನು ಬ್ಯಾಂಕ್ ಖರೀದಿಸಿದೆ. ₹ 3.5 ಕೋಟಿಯನ್ನು ಮುಂಗಡವಾಗಿ ಪಾವತಿಸಿದೆ. ಉಳಿದ ಮೊತ್ತ ಪಾವತಿಸಿ ‘ಇತರೆ ವೆಚ್ಚ’ಗಳಡಿ ನಮೂದಿಸುವಂತೆ ಪ್ರಾದೇಶಿಕ ಕಚೇರಿಗಳಿಗೆ ಸೂಚಿಸಿದೆ ಎಂದು ಆರೋಪಿಸಿದೆ.
ಸುಬ್ರಹ್ಮಣಿಯನ್ ಅವರು ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಒಂದೆರಡು ದಿನಗಳ ಹಿಂದಷ್ಟೇ ಅಂತರ ರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕ ಸ್ಥಾನದಿಂದ ಪದಚ್ಯುತಗೊಂಡಿದ್ದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ಅಧ್ಯಕ್ಷೆ ಸುಪ್ರಿಯಾ ಶ್ರೀನೆತ್ ಅವರು, ‘ಬ್ಯಾಂಕ್ನ ದಾಖಲೆಗಳ ಪ್ರಕಾರ, ಕಳೆದ ವರ್ಷ ಜೂನ್–ಜುಲೈ ತಿಂಗಳಲ್ಲಿ 1.99 ಲಕ್ಷ ಪ್ರತಿಗಳ ಖರೀದಿಗೆ ಆದೇಶಿಸಲಾಗಿದೆ’ ಎಂದರು.
‘ಪ್ರಧಾನಿ ಮೋದಿ ಮತ್ತು ಬಿಜೆಪಿಯ ಹೊಗಳುಭಟ’ರಾಗಿದ್ದವರ ಈ ಕೃತಿಯ ಪ್ರತಿಗಳನ್ನು ಬ್ಯಾಂಕ್ನ ವಲಯ, ಪ್ರಾದೇಶಿಕ ಕಚೇರಿಗಳ ಮೂಲಕ ವಿದ್ಯಾರ್ಥಿಗಳು, ಖಾತೆದಾರರು, ಕಾಲೇಜುಗಳು, ಗ್ರಂಥಾಲಯಗಳಿಗೆ ವಿತರಿಸಲಾಗಿದೆ’ ಎಂದು ಶ್ರೀನೆತ್ ತಿಳಿಸಿದರು.
‘ಕೋವಿಡ್ ವೇಳೆ ಇದೇ ವ್ಯಕ್ತಿಯು ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದರು. ಆ ಅವಧಿಯಲ್ಲಿ ದೇಶ ಶೇ 24ರಷ್ಟು ಆರ್ಥಿಕ ಕುಸಿತ ಕಂಡಿತ್ತು. ಆಗ ಅವರು ಆರ್ಥಿಕ ಸಲಹೆ ನೀಡಿದ್ದಕ್ಕಿಂತಲೂ ಸರ್ಕಾರವನ್ನು ಹೊಗಳಿದ್ದೇ ಹೆಚ್ಚು’ ಎಂದು ಟೀಕಿಸಿದರು.
’ಬೃಹತ್ ಸಂಖ್ಯೆಯಲ್ಲಿ ಪ್ರತಿಗಳನ್ನು ಖರೀದಿಸಿರುವ ಬ್ಯಾಂಕ್ನ ನಡೆ ಕುರಿತು ತನಿಖೆಗೆ ಆಗ್ರಹಿಸಿದ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದಲ್ಲಿ ಸಮಗ್ರ ವಿವರ ನೀಡುತ್ತಾರೆ‘ ಎಂದು ಆಶಿಸಿದರು.
ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಅಧಿಕಾರವಧಿಯ ವಿಸ್ತರಣೆ ನಿರೀಕ್ಷೆಯಲ್ಲಿರುವ ಯೂನಿಯನ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಎ.ಮಣಿಮೇಖಲೈ ಅವರು, ಈ ವಹಿವಾಟಿನ ಮೂಲಕ ‘ತಮ್ಮ ಅವಧಿಯ ವಿಸ್ತರಣೆಗಾಗಿ ಪರೋಕ್ಷವಾಗಿ ಲಂಚ ನೀಡಿದ್ದಾರೆಯೇ’ ಎಂದು ಶ್ರೀನೆತ್ ಪ್ರಶ್ನಿಸಿದರು.
ಕೃತಿಗಳನ್ನು ಖರೀದಿಸುವ ಪೂರ್ವಭಾವಿಯಾಗಿ ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಹಣಕಾಸು ಸೇವೆಗಳ ಇಲಾಖೆಯ ಅನುಮೋದನೆ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.