ADVERTISEMENT

ಭೋಪಾಲ್‌ ಅನಿಲ ದುರಂತ: ಯೂನಿಯನ್ ಕಾರ್ಬೈಡ್ ಕಾರ್ಖಾನೆಯ 10 ಟನ್‌ ತ್ಯಾಜ್ಯ ದಹನ

ಪಿಟಿಐ
Published 4 ಮಾರ್ಚ್ 2025, 2:33 IST
Last Updated 4 ಮಾರ್ಚ್ 2025, 2:33 IST
   

ಇಂದೋರ್: ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆ ಕನಿಷ್ಠ 10 ಟನ್ ವಿಷಕಾರಿ ತ್ಯಾಜ್ಯವನ್ನು ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪೀಥಂಪುರದಲ್ಲಿ ದಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಹನ ಪ್ರಕ್ರಿಯೆ ಸಮಯದಲ್ಲಿ ಅನಿಲ ಹೊರಸೂಸುವಿಕೆಯು ಪ್ರಮಾಣಿತ ಮಿತಿಗಳಲ್ಲಿಯೇ ಇತ್ತು ಎಂದು ಅವರು ಹೇಳಿದ್ದಾರೆ.

ಇದೀಗ ನಿಷ್ಕ್ರಿಯಗೊಂಡಿರುವ, ಭೂಪಾಲ್‌ನ ಯೂನಿಯನ್ ಕಾರ್ಬೈಡ್ ಕಂಪನಿಯ 337 ಟನ್‌ ತ್ಯಾಜ್ಯವನ್ನು ವಿಲೇವಾರಿಗಾಗಿ ಪೀಥಂಪುರಕ್ಕೆ ಜ. 2ರಂದು ತರಲಾಗಿತ್ತು. ಈ ಪೈಕಿ 10 ಟನ್ ತ್ಯಾಜ್ಯದ ಪ್ರಾಯೋಗಿಕ ದಹನ ಪ್ರಕಿಯೆ ಮುಕ್ತಾಯಗೊಂಡಿದೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಇಂದೋರ್ ವಿಭಾಗದ ಆಯುಕ್ತ ದೀಪಕ್ ಸಿಂಗ್, ಶುಕ್ರವಾರ ಪೀಥಂಪುರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 10 ಟನ್ ಯೂನಿಯನ್ ಕಾರ್ಬೈಡ್ ಕಾರ್ಖಾನೆ ತ್ಯಾಜ್ಯವನ್ನು ದಹನ ಮಾಡಲು ಪ್ರಾರಂಭಿಸಿದ್ದೇವು. ಸೋಮವಾರ ಈ ಪ್ರಕ್ರಿಯೆ ಪೂರ್ಣಗೊಂಡಿದೆ. ಮೊದಲ ಹಂತದ ಪ್ರಯೋಗದಲ್ಲಿ ಅನಿಲ ಹೊರಸೂಸುವಿಕೆ ಅನುಮತಿಸಲಾದ ಮಿತಿಯೊಳಗೆ ಇತ್ತು ಎಂದು ಅವರು ಹೇಳಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿಯ ತಂಡವು ಇಡೀ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಿತು. ಪೀಥಂಪುರ ಮತ್ತು ಇಂದೋರ್ ಎರಡೂ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸಾಮಾನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾರ್ಚ್ 4 ರಂದು ಎರಡನೇ ಹಂತದ ದಹನ ಪ್ರಕ್ರಿಯೆಗೆ ಸಿದ್ಧತೆ ನಡೆಯುತ್ತಿದೆ. ಈ ವೇಳೆ ಇನ್ನೂ 10 ಟನ್ ತ್ಯಾಜ್ಯವನ್ನು ಸುಡಲಾಗುವುದು ಎಂದೂ ಸಿಂಗ್ ನುಡಿದಿದ್ದಾರೆ.

ಕಳೆದ 24 ಗಂಟೆಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಯದಲ್ಲಿ ಈ ದಹನ ಘಟಕದಿಂದ ಹೊರಸೂಸಲ್ಪಟ್ಟ ಕಣಗಳು (PM), ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಆಕ್ಸೈಡ್‌ಗಳು, ಕಾರ್ಬನ್ ಮಾನಾಕ್ಸೈಡ್, ಹೈಡ್ರೋಜನ್ ಕ್ಲೋರೈಡ್, ಹೈಡ್ರೋಜನ್ ಫ್ಲೋರೈಡ್ ಮತ್ತು ಸಾವಯವ ಇಂಗಾಲ ಸೇರಿದಂತೆ ಹೊರಸೂಸುವಿಕೆಯು ಪ್ರಮಾಣಿತ ಮಿತಿಗಳಲ್ಲಿದೆ ಎಂದು ಮಾಲಿನ್ಯ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಯೂನಿಯನ್ ಕಾರ್ಬೈಡ್ ತ್ಯಾಜ್ಯವನ್ನು ಸುಡುವ ಮೊದಲ ಪ್ರಯೋಗವು ಸುಮಾರು 75 ಗಂಟೆಗಳ ಕಾಲ ನಡೆಯಿತು. ಈ ಸಮಯದಲ್ಲಿ ಪ್ರತಿ ಗಂಟೆಗೆ 135 ಕಿಲೋಗ್ರಾಂಗಳಷ್ಟು ತ್ಯಾಜ್ಯವನ್ನು ದಹನ ಘಟಕಕ್ಕೆ ಸುರಿಯಲಾಗಿತ್ತು ಎಂದು ಮಧ್ಯಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಶ್ರೀನಿವಾಸ್ ದ್ವಿವೇದಿ ತಿಳಿಸಿದ್ದಾರೆ.

ಮೊದಲ ಹಂತದ ದಹನ ಪ್ರಕಿಯೆಯಲ್ಲಿ ಸುಮಾರು 60 ಮಂದಿ ಅಧಿಕಾರಿಗಳು ಮತ್ತು ಉದ್ಯೋಗಿಗಳು ಭಾಗಿಯಾಗಿದ್ದರು. ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸುಮಾರು 20 ಸಿಬ್ಬಂದಿ ಇದ್ದರು. ಇವರು ಇಡೀ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದರು. ಮೇಲ್ವಿಚಾರಣೆಯಲ್ಲಿ ತೊಡಗಿದ್ದ ಸಿಬ್ಬಂದಿಯನ್ನು ಪ್ರತಿ 8 ಗಂಟೆಗಳಿಗೊಮ್ಮೆ ಬದಲಾಯಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

1984ರ ದುರಂತಕ್ಕೆ ಕಾರಣವಾದ ಮೀಥೈಲ್ ಐಸೋಸೈನೇಟ್ (ಎಂಐಸಿ) ಅನಿಲವು ತ್ಯಾಜ್ಯದಲ್ಲಿ ಇಲ್ಲ ಮತ್ತು ಅದು ಯಾವುದೇ ವಿಕಿರಣಶೀಲ ಕಣಗಳನ್ನು ಹೊಂದಿಲ್ಲ ಎಂದು ಮಂಡಳಿ ಹೇಳಿಕೊಂಡಿದೆ.‌

ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ 1984ರ ಡಿಸೆಂಬರ್ 2 ಮತ್ತು 3ರ ನಡುವಿನ ರಾತ್ರಿ ಸೋರಿಕೆಯಾದ ವಿಷಕಾರಿ ಮೀಥೈಲ್ ಐಸೊಸೈಯನೇಟ್ (ಎಂಐಸಿ) ಅನಿಲವು 5,479 ಜನರ ಸಾವಿಗೆ ಕಾರಣವಾಗಿತ್ತು. ಸಾವಿರಾರು ಮಂದಿ ದೀರ್ಘಾವಧಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಇದನ್ನು ‘ಭೋಪಾಲ್‌ ಅನಿಲ ದುರಂತ’ ಎಂದೂ ಕರೆಯಲಾಗುತ್ತದೆ.

ತ್ಯಾಜ್ಯ ವಿಲೇವಾರಿ ವಿರೋಧಿಸಿ ಪ್ರತಿಭಟನೆ

ಯೂನಿಯನ್‌ ಕಾರ್ಬೈಡ್‌ ಕಾರ್ಖಾನೆಯ ತ್ಯಾಜ್ಯವನ್ನು ಪೀಥಂಪುರದಲ್ಲಿ ವಿಲೇವಾರಿ ಮಾಡುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಇಂದೋರ್‌ನಲ್ಲಿ ಪ್ರತಿಭಟನೆ ನಡೆಸಿದ್ದವು. ಇದೀಗ ನಿಷ್ಕ್ರಿಯಗೊಂಡಿರುವ, ಭೂಪಾಲ್‌ನ ಯೂನಿಯನ್ ಕಾರ್ಬೈಡ್ ಕಂಪನಿಯ 337 ಟನ್‌ ತ್ಯಾಜ್ಯವನ್ನು ಪೀಥಂಪುರದಲ್ಲಿ ವಿಲೇವಾರಿ ಮಾಡಿದಲ್ಲಿ ಅದು ಸ್ಥಳೀಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ ಪರಿಸರದ ಮೇಲೂ ದುಷ್ಪರಿಣಾಮ ಬೀರಲಿದೆ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದ್ದಾರೆ.

ಯೂನಿಯನ್‌ ಕಾರ್ಬೈಡ್‌ ಕಾರ್ಖಾನೆಯ ತ್ಯಾಜ್ಯ ವಿಲೇವಾರಿಗೆ ಮಧ್ಯಪ್ರದೇಶ ಹೈಕೋರ್ಟ್‌ 6 ವಾರ ಕಾಲಾವಕಾಶ ನೀಡಿತ್ತು. ಸುರಕ್ಷತಾ ಮಾರ್ಗಸೂಚಿಗಳ ಪ್ರಕಾರವೇ ತ್ಯಾಜ್ಯ ವಿಲೇವಾರಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್‌, ಈ ವಿಷಯದಲ್ಲಿ ತಪ್ಪು ಮಾಹಿತಿ ನೀಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡಿತ್ತು.

ತ್ಯಾಜ್ಯ ವಿಲೇವಾರಿ ಹಿನ್ನೆಲೆ ಪೀಥಂಪುರ ಕೈಗಾರಿಕಾ ಪ್ರದೇಶದ ಸುತ್ತಲೂ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.