ADVERTISEMENT

ಅಸ್ವಸ್ಥಗೊಂಡ ಸಹಪ್ರಯಾಣಿಕನಿಗೆ ವಿಮಾನದಲ್ಲೇ ಚಿಕಿತ್ಸೆ ನೀಡಿದ ಕೇಂದ್ರ ಸಚಿವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2021, 15:45 IST
Last Updated 16 ನವೆಂಬರ್ 2021, 15:45 IST
ಅಸ್ವಸ್ಥಗೊಂಡ ಸಹ ಪ್ರಯಾಣಿಕನಿಗೆ ಚಿಕಿತ್ಸೆ ನೀಡುತ್ತಿರುವ ಭಾಗವತ್‌ ಕರಡ್‌
ಅಸ್ವಸ್ಥಗೊಂಡ ಸಹ ಪ್ರಯಾಣಿಕನಿಗೆ ಚಿಕಿತ್ಸೆ ನೀಡುತ್ತಿರುವ ಭಾಗವತ್‌ ಕರಡ್‌    

ಮುಂಬೈ: ವಿಮಾನ ಹಾರಾಟ ನಡೆಸುತ್ತಿರುವಾಗಲೇ ಆಸ್ವಸ್ಥಗೊಂಡ ಸಹ ಪ್ರಯಾಣಿಕರೊಬ್ಬರಿಗೆ ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್‌ ಕಿಶನ್‌ ರಾವ್‌ ಕರಡ್‌ ವಿಮಾನದಲ್ಲೇ ತುರ್ತು ಚಿಕಿತ್ಸೆ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

ಸಚಿವ ಭಾಗವತ್‌ ಅವರು ಸಹಪ್ರಯಾಣಿಕನ ನೆರವಿಗೆ ಧಾವಿಸಿದ ವಿಚಾರವನ್ನು ರಾಜ್ಯಸಭೆ ಸದಸ್ಯ ವಿನಯ್‌ ಸಹಸ್ತ್ರಬುದ್ಧೆ ಅವರು ಮಂಗಳವಾರ ಟ್ವೀಟ್‌ ಮಾಡಿದ್ದರು.

‘ನಿನ್ನೆ 6ಇ171 ವಿಮಾನದಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಪ್ರಯಾಣಿಕರೊಬ್ಬರು ಹಠಾತ್ ಕುಸಿದು ಬಿದ್ದರು. ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಚಿವ ಭಾಗವತ್ ಕರಡ್‌ ಅವರು ರೋಗಿಯ ಬಳಿಗೆ ಧಾವಿಸಿ ಚಿಕಿತ್ಸೆ ನೀಡಿದ್ದಾರೆ. ಅವರ ಸೇವೆ ಶ್ಲಾಘನೀಯ,’ ಎಂದು ಹೇಳಿದ್ದರು.

ADVERTISEMENT

ಸಹಸ್ರಬುದ್ಧೆ ಅವರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿರುವ ಸಚಿವ ಭಾಗವತ್‌, ‘ವಿನಯ್ ಅವರೇ ಧನ್ಯವಾದಗಳು. ನಾನು ಒಬ್ಬ ವೈದ್ಯನಾಗಿ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಸಹ-ಪ್ರಯಾಣಿಕನಿಗೆ ನಾನು ಸಹಾಯ ಮಾಡಿದ್ದಕ್ಕೆ ಸಂತೋಷವಾಗಿದೆ,’ಎಂದು ಹೇಳಿದ್ದಾರೆ.

‘ತಮ್ಮ ಕಾರ್ಯಕ್ಕಾಗಿ ಸಚಿವ ಭಾಗವತ್‌ ಅವರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಸಹ ಪ್ರಯಾಣಿಕನಿಗೆ ನೆರವಾದ ನಿಮ್ಮ ಈ ನಡೆಯು ಸ್ಫೂರ್ತಿದಾಯಕ,’ ಎಂದು ವಿಮಾನಯಾನ ಸಂಸ್ಥೆ ಧನ್ಯವಾದ ಅರ್ಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.