ADVERTISEMENT

ರಾಜಸ್ಥಾನ ಸರ್ಕಾರ ಅಸ್ಥಿರ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ಗೆ ನೋಟಿಸ್

ಏಜೆನ್ಸೀಸ್
Published 20 ಜುಲೈ 2020, 9:31 IST
Last Updated 20 ಜುಲೈ 2020, 9:31 IST
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್    

ಜೈಪುರ: ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕಾಗಿ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‌ಒಜಿ) ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ನೋಟಿಸ್ ನೀಡಿದೆ ಮತ್ತು ಅವರ ಹೇಳಿಕೆಯನ್ನು ದಾಖಲಿಸುವಂತೆ ನಿರ್ದೇಶಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಆಪ್ತ ಕಾರ್ಯದರ್ಶಿ ಮೂಲಕ ಸಚಿವರಿಗೆ ನೋಟಿಸ್ ನೀಡಲಾಗಿದೆ' ಎಂದು ರಾಜಸ್ಥಾನದ ಎಸ್‌ಒಜಿ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಎಡಿಪಿ) ಅಶೋಕ್ ರಾಥೋಡ್ ತಿಳಿಸಿದ್ದಾರೆ.

ರಾಜಸ್ಥಾನ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ ಮುಖ್ಯ ವಿಪ್ ಮಹೇಶ್ ಜೋಶಿ ಅವರು ಹಿಂದಿನ ದಿನ ಸಂಜೆ ಬಿಡುಗಡೆಯಾಗಿದ್ದ ಮೂರು ಆಡಿಯೊ ಟೇಪ್‌ಗಳ ಬಗ್ಗೆ ದೂರು ನೀಡಿದ್ದರು. ಬಳಿಕ ಕಳೆದ ಶುಕ್ರವಾರ, ಎಸ್‌ಒಜಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿತ್ತು. ಈ ಆಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ADVERTISEMENT

ಸೋರಿಕೆಯಾದ ಆಡಿಯೊಟೇಪ್‌ಗಳಲ್ಲಿ ಗಜೇಂದ್ರ ಸಿಂಗ್ ಸೇರಿದಂತೆ ಬಂಡಾಯ ಕಾಂಗ್ರೆಸ್ ಶಾಸಕರು ಮತ್ತು ಇತರರ ನಡುವಿನ ವಿಸ್ತಾರವಾದ ಸಂಭಾಷಣೆಗಳಿದ್ದವು. ಇದರಲ್ಲಿ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಉರುಳಿಸುವ ತಂತ್ರಗಳನ್ನು ಚರ್ಚಿಸುವುದನ್ನು ಕೇಳಬಹುದು.

ಎಫ್‌ಐಆರ್‌ನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಅಮಾನತುಗೊಂಡಿರುವ ಸರ್ದಾರ್‌ಶಹರ್‌ನ ಬಂಡಾಯ ಶಾಸಕ ಭನ್ವರ್ ಲಾಲ್ ಶರ್ಮಾ ಮತ್ತು ನೆಟ್‌ವರ್ಕರ್ ಆಗಿರುವ ಸಂಜಯ್ ಜೈನ್ ಅವರನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಜೈನ್‌ ಅವರನ್ನು ಶುಕ್ರವಾರ ರಾತ್ರಿ ಎಸ್‌ಒಜಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.