ಲಖನೌ: ಆಪರೇಷನ್ ಸಿಂಧೂರ ಮೂಲಕ 'ವಿಫಲ ರಾಷ್ಟ್ರ' ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ಭಾರತೀಯ ಸೇನೆಯು ನಾಶ ಮಾಡಿರುವುದು ಹೆಮ್ಮೆಯ ಸಂಗತಿ. ವೈರಿಗಳಿಗೆ ಇದು ಸ್ಪಷ್ಟ ಸಂದೇಶವಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದರು.
ಬುಧವಾರ ಲಖನೌನಲ್ಲಿ ನಡೆದ 'ಭಾರತ ಶೌರ್ಯ ತಿರಂಗ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದರು.
ಉತ್ತರಪ್ರದೇಶದಾದ್ಯಂತ ಬಿಜೆಪಿಯು 'ಭಾರತ ಶೌರ್ಯ ತಿರಂಗ ಯಾತ್ರೆ' ಹಮ್ಮಿಕೊಂಡಿದೆ.
ಲಖನೌನಲ್ಲಿ ಯಾತ್ರೆಗೆ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ಯಾತ್ರೆಯಲ್ಲಿ ಬಾರಿ ಪ್ರಮಾಣದ ಜನರು ಸೇರಿರುವುದು, ಭಾರತೀಯ ಸೇನೆಯ ಮೇಲಿನ ಜನರ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಕಳೆದ 75 ವರ್ಷಗಳಿಂದಲೂ ಪಾಕಿಸ್ತಾನವು ಉಗ್ರರನ್ನು ಪೋಷಿಸಿಕೊಂಡು ಬಂದಿರುವ 'ವಿಫಲ ರಾಷ್ಟ್ರವಾಗಿದೆ'. ಭಯೋತ್ಪಾದಕರ ಅಂತ್ಯಕ್ರಿಯೆಗೆ ಪಾಕಿಸ್ತಾನದ ನಾಯಕರು ಹಾಗೂ ಸೇನಾಧಿಕಾರಿಗಳು ಭಾಗವಹಿಸಿದ್ದನ್ನು ಜಗತ್ತು ನೋಡಿದೆ ಎಂದರು.
ಭಾರತದ ವಿರುದ್ಧ ನಿಂತರೆ, ಅವರ ಸಾವಿಗೆ ಕಣ್ಣೀರು ಹಾಕಲು ಕೂಡ ಯಾರೂ ಉಳಿಯುವುದಿಲ್ಲ ಎನ್ನುವುದನ್ನು ಭಾರತೀಯ ಸೇನೆ ಸಾಬೀತು ಪಡಿಸಿದೆ ಎಂದರು.
ಮೋದಿಯವರ 'ದೇಶ ಮೊದಲು' ಎನ್ನುವ ನೀತಿಯು ಭಾರತೀಯರಿಗೆ ದಾರಿ ದೀಪವಾಗಿದೆ. 140 ಕೋಟಿ ಭಾರತೀಯರು, ತಮ್ಮ ಸ್ವ ಹಿತಾಸಕ್ತಿಗಿಂತ ದೇಶದ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ . ಭಾರತವನ್ನು ಜಗತ್ತಿನ ಯಾವ ಶಕ್ತಿಯೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಬಿಜೆಪಿ ನಾಯಕರಾದ ಭೂಪೇಂದ್ರ ಚೌಧರಿ, ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಹಣಕಾಸು ಸಚಿವ ಸುರೇಶ್ ಖನ್ನಾ ಸೇರಿದಂತೆ ಸಚಿವರು ಹಾಗು ಶಾಸಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.